ಚಿತ್ರದುರ್ಗ: ಲ್ಯಾಪ್ಟಾಪ್ ವಿತರಿಸುವಂತೆ ಆಗ್ರಹಿಸಿ ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಮೌನ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
‘ದಾವಣಗೆರೆ ವಿಶ್ವವಿದ್ಯಾಲಯ ಚಿತ್ರದುರ್ಗದ ಕ್ಯಾಂಪಸ್ನಲ್ಲಿ ಅಧ್ಯಯನ ಮಾಡುತ್ತಿರುವ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಲಾಗಿದೆ. ಅವರಂತೆ ನಮಗೂ ಲ್ಯಾಪ್ಟಾಪ್ ವಿತರಿಸಬೇಕು’ ಎಂದು ಆಗ್ರಹಿಸಿ ಸೋಮವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
‘ನಮಗೆ ಲ್ಯಾಪ್ಟಾಪ್ ವಿತರಿಸುವಂತೆ ಕಾಲೇಜಿನ ಪ್ರಾಚಾರ್ಯರ ಗಮನಕ್ಕೆ ತರಲಾಗಿದೆ. ಪರೀಕ್ಷೆ ಸಮೀಪಿಸುತ್ತಿದ್ದರೂ ಲ್ಯಾಪ್ಟಾಪ್ ವಿತರಿಸಿಲ್ಲ, ಬೇರೆ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಲಾಗಿದೆ. ಅವರಂತೆ ನಾವು ಕೂಡ ವಿದ್ಯಾರ್ಥಿಗಳಲ್ಲವೇ’ ಎಂದು ಪ್ರಶ್ನಿಸಿ, ‘ಸರ್ಕಾರ ಈ ರೀತಿಯ ತಾರತಮ್ಯ ಮಾಡಬಾರದು’ ಪ್ರತಿಭಟನಾ ನಿರತರು ದೂರಿದರು.
ಸ್ನಾತಕೋತ್ತರ ವಿದ್ಯಾರ್ಥಿಗಳಾದ ಬಿ. ಎಲ್. ಜಗದೀಶ್, ಚಂದ್ರಲೇಖಾ, ಜೆ. ಶ್ರೀನಿವಾಸ, ಡಿ.ಸಿ. ಪಾಪಣ್ಣ, ಎನ್. ತಿಪ್ಪೇಶ್, ಅಜರುದ್ದೀನ್, ಸಿ. ಗೌರಮ್ಮ, ಕೆ.ವಿ. ಪಲ್ಲವಿ, ಜಿ. ಮಲ್ಲಿಕಾರ್ಜುನ, ಜೆ. ಮಹಾಲಕ್ಷ್ಮಿ, ಎಸ್. ಶ್ರುತಿ, ಸಿ. ಮಮತಾ, ಎಂ. ಮಂಗಳ ಅವರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.