ಹೊಸಪೇಟೆ: ಫೆಲೋಶಿಪ್ ಬಿಡುಗಡೆಗೆ ಆಗ್ರಹಿಸಿ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಶನಿವಾರ ಪತ್ರ ಚಳವಳಿ ನಡೆಸಿದರು.
2019ರ ಡಿಸೆಂಬರ್ನಿಂದ ಇದುವರೆಗೆ ಫೆಲೋಶಿಪ್ ನೀಡಿಲ್ಲ. ಹೊಸ ಶೈಕ್ಷಣಿಕ ವರ್ಷದಲ್ಲಿ ಹೊಸ ವಿದ್ಯಾರ್ಥಿಗಳು, ದ್ವಿತೀಯ, ತೃತೀಯ ವರ್ಷದ ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್ಗೆ ಅರ್ಜಿ ಸಲ್ಲಿಕೆ, ನವೀಕರಣಕ್ಕೆ ಅಧಿಸೂಚನೆ ಹೊರಡಿಸಿಲ್ಲ. ಫೆಲೋಶಿಪ್ ಸಿಗದ ಕಾರಣ ಅರ್ಧವಾರ್ಷಿಕ ವರದಿಗಳ ಶುಲ್ಕ ಪಾವತಿಗೆ ಕಷ್ಟವಾಗಿದೆ.ಸಂಶೋಧನಾ ಕ್ಷೇತ್ರ ಕಾರ್ಯ, ಪ್ರಯೋಗಾಲಯದ ಪರಿಕರ ಖರೀದಿಸಲು ತೊಂದರೆ ಉಂಟಾಗಿದೆ. ಇದು ಒಟ್ಟಾರೆ ಸಂಶೋಧನಾ ಗುಣಮಟ್ಟ, ಪ್ರಗತಿಯ ಮೇಲೆ ಪರಿಣಾಮ ಬೀರಿದೆ ಎಂದು ವಿದ್ಯಾರ್ಥಿಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಬರೆದ ಪತ್ರದಲ್ಲಿ ಗೋಳು ತೋಡಿಕೊಂಡಿದ್ದಾರೆ.
ಫೆಲೋಶಿಪ್ ಅವಲಂಬಿಸಿ ಗ್ರಾಮೀಣ ಭಾಗದ ಬಡವರು, ರೈತರ ಮಕ್ಕಳು ಸಂಶೋಧನೆ ಮಾಡುತ್ತಿದ್ದಾರೆ. 2017ರಿಂದ ಸಕಾಲಕ್ಕೆ ಫೆಲೋಶಿಪ್ ಸಿಗದ ಕಾರಣ ವಿದ್ಯಾರ್ಥಿಗಳು ಬಹಳ ನೊಂದುಕೊಂಡಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಆದಷ್ಟು ಶೀಘ್ರ ಫೆಲೋಶಿಪ್ ಬಿಡುಗಡೆಗೆ ಮುಖ್ಯಮಂತ್ರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೂಚನೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಸಂಶೋಧನಾ ವಿದ್ಯಾರ್ಥಿಗಳಾದ ರಾಜಶೇಖರ ಬಡಿಗೇರ, ಜಿ.ಆರ್. ಮಹಾಂತೇಶ, ಸಿದ್ದು ಬಿರಾದಾರ, ವಿಶ್ವನಾಥ ಪತ್ತಾರ, ಡಿ. ವಿರೇಶ, ಶ್ಯಾಮಣ್ಣ ಮಡ್ಡೇರ, ಸುನೀಲ ಕುಸ್ತಿ, ಎಂ. ಮಲ್ಲಿಕಾರ್ಜುನ, ವಿನೋದ, ಜಗದೀಶ, ರವೀಂದ್ರನಾಥ, ವತ್ಸಲಾ, ಶಂಕ್ರಮ್ಮ, ಲೀಲಾವತಿ, ಗಂಗಮ್ಮ, ಮಂಜಮ್ಮ ಇದ್ದರು.