ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ‘ಅನನ್ಯ’ ವಸತಿ ನಿಲಕ್ಕೆ ಕುಲಪತಿ ಸ.ಚಿ. ರಮೇಶ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಸತಿ ನಿಲಯದ ಅಡುಗೆ ಕೋಣೆ, ಅಲ್ಲಿದ್ದ ದವಸ ಧಾನ್ಯ, ಸ್ವಚ್ಛತೆ ಪರಿಶೀಲಿಸಿದರು. ನಂತರ ವಿದ್ಯಾರ್ಥಿಗಳಿಗೆ ಮಾಡಿದ್ದ ಊಟವನ್ನು ಸವಿದರು. ಸ್ಥಳದಲ್ಲೇ ವಿದ್ಯಾರ್ಥಿಗಳ ಕುಂದು ಕೊರತೆ ಆಲಿಸಿದರು.
‘ಕೆಲ ಕುಂದು ಕೊರತೆಗಳ ಬಗ್ಗೆ ವಿದ್ಯಾರ್ಥಿಗಳು ಗಮನಕ್ಕೆ ತಂದಿದ್ದಾರೆ. ಅವುಗಳನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು. ಬೇಸಿಗೆ ಕಾಲ ಆರಂಭವಾಗಿದೆ. ವಿದ್ಯಾರ್ಥಿಗಳು ನೀರನ್ನು ಮಿತವಾಗಿ ಬಳಸಬೇಕು. ಅಗತ್ಯಕ್ಕಷ್ಟೇ ಉಪಯೋಗಿಸಬೇಕು. ವ್ಯರ್ಥವಾಗಿ ನೀರು ಚೆಲ್ಲಬಾರದು’ ಎಂದು ಕಿವಿಮಾತು ಹೇಳಿದರು.