ಹೊಸಪೇಟೆ: ಇಲ್ಲಿಗೆ ಸಮೀಪದ ತುಂಗಭದ್ರಾ ಜಲಾಶಯ ತುಂಬುವ ಅಂಚಿಗೆ ಬಂದಿರುವುದರಿಂದ ಅಣೆಕಟ್ಟೆಯ ಮೂರು ಕ್ರಸ್ಟ್ಗೇಟ್ಗಳನ್ನು ತೆಗೆದು ಭಾನುವಾರ ಸಂಜೆ ನದಿಗೆ ನೀರು ಹರಿಸಲಾಯಿತು.
ಒಟ್ಟು 33 ಕ್ರಸ್ಟ್ಗೇಟ್ಗಳ ಪೈಕಿ ಮೂರು ಗೇಟ್ಗಳನ್ನು ತಲಾ ಒಂದು ಅಡಿ ಮೇಲಕ್ಕೆ ತೆಗೆದು ಒಟ್ಟು 6,594 ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಹಂತ ಹಂತವಾಗಿ ಹೆಚ್ಚಿನ ಗೇಟ್ಗಳನ್ನು ತೆಗೆದು ಅಧಿಕ ನೀರು ಹರಿಸಲು ನಿರ್ಧರಿಸಲಾಗಿದೆ.
1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 1,632.20 ಅಡಿ ನೀರಿನ ಸಂಗ್ರಹವಿದೆ. ಜಲಾಶಯ ಸಂಪೂರ್ಣ ಭರ್ತಿಯಾಗಲು ಅರ್ಧ ಅಡಿಗೂ ಅಧಿಕ ನೀರು ಬೇಕಿದೆ. 33,737 ಕ್ಯುಸೆಕ್ ಒಳಹರಿವು ಇದೆ. ಎರಡುವರೆ ಟಿಎಂಸಿಗೂ ಅಧಿಕ ನೀರು ಹರಿದು ಬರುತ್ತಿದೆ. ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ.
ಇದನ್ನು ಗಮನದಲ್ಲಿ ಇಟ್ಟುಕೊಂಡು ಭಾನುವಾರ ನದಿಗೆ ನೀರು ಹರಿಸಲು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ನಿರ್ಧರಿಸಿತು. ‘ಯಾವುದೇ ಕ್ಷಣ ನದಿಗೆ 5,000ದಿಂದ 50,000 ಕ್ಯುಸೆಕ್ ವರೆಗೆ ನೀರು ಹರಿಸಲಾಗುವುದು. ನದಿ ಪಾತ್ರದ ಜನ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು’ ಎಂದು ಭಾನುವಾರ ಬೆಳಿಗ್ಗೆ ಮಂಡಳಿ ಪ್ರಕಟಣೆ ಹೊರಡಿಸಿತ್ತು.