ಹೊಸಪೇಟೆ: 2019–20ನೇ ಸಾಲಿನ ಜಿಲ್ಲಾ ಖನಿಜ ನಿಧಿ ಅನುದಾನದಡಿ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ್ ಜೀರೆ ಬುಧವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ‘ಕ್ರೀಡಾಸಕ್ತರ ಬೇಡಿಕೆಗೆ ತಕ್ಕಂತೆ ಸ್ಕೇಟಿಂಗ್ ಅಂಕಣ ನಿರ್ಮಾಣಕ್ಕೆ ಚಾಲನೆ ಕೊಡಲಾಗಿದೆ. ಇದು ಇಡೀ ಜಿಲ್ಲೆಯಲ್ಲೆ ಮೊದಲ ಅಂಕಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ’ ಎಂದರು.
‘ಒಟ್ಟು ₹1.44 ಕೋಟಿಯಲ್ಲಿ ಕ್ರೀಡಾ ಸಂಕೀರ್ಣದ ನವೀಕರಣ, ದುರಸ್ತಿ, ₹86.54 ಲಕ್ಷದಲ್ಲಿ ಸ್ಕೇಟಿಂಗ್ ಅಂಕಣ ನಿರ್ಮಿಸಲಾಗುವುದು. ಮುಂದಿನ ದಿನಗಳಲ್ಲಿ ಕ್ರೀಡಾ ಶಾಲೆ ನಿರ್ಮಿಸಿ, ರಾಷ್ಟ್ರ, ಅಂತರರಾಷ್ಟ್ರೀಯ ಸ್ಪರ್ಧೆಗೆ ತಯಾರಿ ನಡೆಸಲು ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು.
ಸ್ಕೇಟಿಂಗ್ ತರಬೇತುದಾರ ಶ್ರವಣ ಕುಮಾರ್, ಸಚಿವರ ಆಪ್ತ ಸಹಾಯಕ ಧರ್ಮೇಂದ್ರ ಸಿಂಗ್, ಕ್ರೀಡಾ ಸಂಕೀರ್ಣದ ಮೇಲ್ವಿಚಾರಕಿ ಶ್ವೇತಾ, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಕವಿತಾ ಸಿಂಗ್, ಸಂದೀಪ್ ಸಿಂಗ್ ಇದ್ದರು.
ಕೊಠಡಿ ನಿರ್ಮಾಣಕ್ಕೆ ಚಾಲನೆ:
ಜಿಲ್ಲಾ ಖನಿಜ ನಿಧಿ ಅನುದಾನದಲ್ಲಿ ಮಂಜೂರಾದ ನಗರದ ಟಿ.ಬಿ. ಡ್ಯಾಂ ಸರ್ಕಾರಿ ಪ್ರೌಢಶಾಲೆಯ ಆರು ಕೊಠಡಿಗಳ ನಿರ್ಮಾಣಕ್ಕೆ ಜೀರೆ ಭೂಮಿ ಪೂಜೆ ನೆರವೇರಿಸಿದರು. ಧನಲಕ್ಷ್ಮಿ, ಸಿಪಿಐ ನಾರಾಯಣ ಇದ್ದರು.