ಹೊಸಪೇಟೆ (ವಿಜಯನಗರ): ಎಲ್ಲ ಕಟ್ಟಡ ಕಾರ್ಮಿಕರಿಗೆ ₹10,000 ಪರಿಹಾರ ನೀಡಬೇಕೆಂದು ಆಗ್ರಹಿಸಿ ಸಿಐಟಿಯು, ಸಿಡಬ್ಲ್ಯೂಎಫ್ಐ ಸಂಘಟನೆಗಳು ಕರೆ ಕೊಟ್ಟಿದ್ದ ಪ್ರತಿಭಟನೆಗೆ ಶುಕ್ರವಾರ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಟ್ಟಡ ಕಾರ್ಮಿಕರು ಕೆಲಸದ ಸ್ಥಳದಲ್ಲೇ ಭಿತ್ತಿ ಪತ್ರಗಳನ್ನು ಹಿಡಿದುಕೊಂಡು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ಘೋಷಿಸಿರುವ ₹3,000ದೊಂದಿಗೆ ₹7,000 ಸೇರಿಸಿ ಒಟ್ಟು ₹10,000 ಪರಿಹಾರ ಧನ ವಿತರಿಸಬೇಕು. ಮುಂದಿನ ಮೂರು ತಿಂಗಳ ವರೆಗೆ ಸತತವಾಗಿ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.
ಮುಂದಿನ ಮೂರು ತಿಂಗಳಿಗೆ ಆಗುವಷ್ಟು 14 ಅಗತ್ಯ ಸಾಮಗ್ರಿಗಳನ್ನು ಒಳಗೊಂಡ ಆಹಾರ ಕಿಟ್ ವಿತರಿಸಬೇಕು. ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬದವರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಬೇಕು ಎಂದು ಒತ್ತಾಯಿಸಿದರು.
‘ಕೋವಿಡ್ನಿಂದ ದುಡಿಮೆ ನಂಬಿ ಬದುಕುತ್ತಿರುವ ಜನರು ಬಹಳ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ತುರ್ತು ನೆರವಿನ ಅಗತ್ಯವಿದೆ. ಸರ್ಕಾರ ಕಾಲಹರಣ ಮಾಡದೆ ಕೂಡಲೇ ಅವರಿಗೆ ನೆರವು ನೀಡಬೇಕು. ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಅವರು ಬಹಳ ಕಷ್ಟದಲ್ಲಿದ್ದಾರೆ’ ಎಂದು ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಎನ್. ಯಲ್ಲಾಲಿಂಗ ತಿಳಿಸಿದ್ದಾರೆ.