ಬೆಂಗಳೂರು: ‘ಹೆಚ್ಚಿನ ಲಾಭಾಂಶ ನೀಡುವುದಾಗಿ ಆಮಿಷವೊಡ್ಡಿದ್ದ ಕಂಪನಿಯೊಂದು ₹ 52.88 ಲಕ್ಷ ಕಟ್ಟಿಸಿಕೊಂಡು ವಂಚಿಸಿದೆ’ ಎಂದು ಆರೋಪಿಸಿ ಪಿ. ಸುಮಲತಾ ಎಂಬುವವರು ನಗರ ಪೊಲೀಸ್ ಕಮಿಷನರ್ ಭಾಸ್ಕರ ರಾವ್ ಅವರಿಗೆ ಶನಿವಾರ ದೂರು ನೀಡಿದ್ದಾರೆ.
‘ತಮಿಳುನಾಡಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕಂಪನಿಯ ಮಾಲೀಕ ಹಾಗೂ ಏಜೆಂಟರು, ಹಣ ಹೂಡಿಕೆ ಮಾಡುವಂತೆ ಹೇಳಿದ್ದರು. ಅವರ ಮಾತು ನಂಬಿ ನಾನು ಸೇರಿದಂತೆ ಏಳು ಮಂದಿ ಹಣ ಹೂಡಿಕೆ ಮಾಡಿದ್ದೆವು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ಕೆಲ ತಿಂಗಳು ಲಾಭಾಂಶ ನೀಡಿದ್ದ ಕಂಪನಿ, ಆ ನಂತರ ಯಾವುದೇ ಹಣವನ್ನೂ ಕೊಟ್ಟಿಲ್ಲ. ಆ ಬಗ್ಗೆ ವಿಚಾರಿಸಿದಾಗ ಏಜೆಂಟರು ಸೂಕ್ತ ಮಾಹಿತಿ ನೀಡುತ್ತಿಲ್ಲ. ನಮ್ಮನ್ನು ವಂಚಿಸಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ಹಣ ವಾಪಸ್ ಕೊಡಿಸಿ’ ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.