ಬೆಂಗಳೂರು: `ಲೈಂಗಿ ಅಲ್ಪ ಸಂಖ್ಯಾತರಿಗೆ ಹೆಚ್ಚಿನ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ 12ನೇ ಪಂಚವಾರ್ಷಿಕ ಯೋಜನೆಯಲ್ಲಿ ವಿಶೇಷ ಒತ್ತು ನೀಡಬೇಕು~ ಎಂದು ಸಮುದಾಯ ಆಧಾರಿತ ಸಂಘಟನೆಯ ಕಾರ್ಯಕ್ರಮ ನಿರ್ದೇಶಕಿ ಸನಾ ಇಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಸರ್ಕಾರ 11ನೇ ಪಂಚವಾರ್ಷಿಕ ಯೋಜನೆಯಲ್ಲಿ ನೀಡಿರುವ ಯೋಜನೆಗಳಿಂದ ಹೆಚ್ಚಿನ ಪ್ರಯೋಜನವಾಗಿಲ್ಲ. ಅಂತ್ಯೋದಯ ಅನ್ನ ಯೋಜನೆ, ರಾಜೀವ್ ಗಾಂಧಿ ಆಶ್ರಯ ಯೋಜನೆಯಡಿ ನಿವೇಶನಗಳನ್ನು ನೀಡುವುದು ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದರೂ ಪಡೆಯಲು ಸಾಧ್ಯವಾಗಿಲ್ಲ~ ಎಂದು ಹೇಳಿದರು.
ಯೋಜನೆಗಳನ್ನು ಪಡೆಯಲು ಸರ್ಕಾರ ಕೇಳುವ ಅಗತ್ಯ ದಾಖಲೆಯನ್ನು ಲೈಂಗಿಕ ಕಾರ್ಯರ್ತೆಯರು ಹಾಗೂ ಅಲ್ಪಸಂಖ್ಯಾತರು ನೀಡಲಾಗುತ್ತಿಲ್ಲ. ಸರ್ಕಾರ ಕನಿಷ್ಠ ಪಕ್ಷ ಗುರುತಿನ ಪತ್ರವನ್ನೂ ನೀಡಿಲ್ಲ. ಇದರಿಂದ ಸವಲತ್ತುಗಳಿಂದ ವಂಚಿತರಾಗಬೇಕಾದ ಪರಿಸ್ಥಿತಿ ಇದೆ ಎಂದು ನೊಂದು ನುಡಿದರು.ಈಚೆಗೆ 12ನೇ ಪಂಚವಾರ್ಷಿಕ ಯೋಜನೆಯ ಬಗ್ಗೆ ಯೋಜನಾ ಆಯೋಗವು ನವದೆಹಲಿಯಲ್ಲಿ ನಡೆಸಿದ ಸಭೆಯಲ್ಲಿ ಸಮುದಾಯದ ಸದಸ್ಯರು ಭಾಗವಹಿಸಿದ್ದೆವು. ಅಲ್ಪಸಂಖ್ಯಾತರ ಹಾಗೂ ಕಾರ್ಯಕರ್ತೆಯರ ಸಮಸ್ಯೆಗಳನ್ನು ಸಭೆಯಲ್ಲಿ ಚರ್ಚಿಸಿ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಅವರು ಹೇಳಿದರು.
ಲೈಂಗಿಕ ಕಾರ್ಯಕರ್ತೆ ಗೀತಾ, `ಸರ್ಕಾರ ಲೈಂಗಿಕ ಕಾರ್ಯಕರ್ತೆಯರಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕು. ಕಾರ್ಯಕರ್ತೆಯರು ಹೆಚ್ಚಾಗಿ ಗರ್ಭ ಕಾಯಿಲೆಗಳಿಗೆ ತುತ್ತಾಗುವುದರಿಂದ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯುವ ಸೌಲಭ್ಯ ನೀಡಬೇಕು. ಲೈಂಗಿಕ ಅಲ್ಪಸಂಖ್ಯಾತರಿಗೂ ಉದ್ಯೋಗವಾಕಾಶ ಕಲ್ಪಿಸಿ ಕೊಡಬೇಕು~ ಎಂದು ಮನವಿ ಮಾಡಿದರು.
ಲೈಂಗಿಕ ಅಲ್ಪಸಂಖ್ಯಾತ ಹಾಗೂ ಕಾರ್ಯಕರ್ತೆಯರ ಮಕ್ಕಳಿಗೆ ಶಿಕ್ಷಣದಲ್ಲಿ ಮೀಸಲಾತಿ ನೀಡುವುದು, ಮತದಾನ ಚೀಟಿಯನ್ನು ವಿತರಣೆ, ಎಚ್.ಐ.ವಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವಾಗ ಎಚ್.ಐ.ವಿ ಸೋಂಕಿತರನ್ನು ಸೇರ್ಪಡೆ ಮಾಡಿಕೊಳ್ಳುವುದು, ಆರೋಗ್ಯ ಕಾರ್ಡ್ಗಳ ವಿತರಣೆ ಹಾಗೂ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಯೋಜನೆಯ ವ್ಯಾಪ್ತಿಗೆ ಸಮುದಾಯದ ಸದಸ್ಯರನ್ನು ಸೇರ್ಪಡೆ ಮಾಡುವುದು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಮುಂದಿನ ಪಂಚವಾರ್ಷಿಕ ಯೋಜನೆಯಲ್ಲಿ ನೀಡುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದರು.