ಬೆಂಗಳೂರು: ‘ನಗರದಲ್ಲಿ 21 ಸಾವಿರಕ್ಕೂ ಅಧಿಕ ಅನಧಿಕೃತ ಜಾಹೀರಾತು ಫಲಕಗಳಿರುವ ಮಾಹಿತಿ ಸಿಕ್ಕಿದ್ದು, ಅವುಗಳ ವಲಯವಾರು ಪಟ್ಟಿ ಸಿದ್ಧಪಡಿಸಿ ಬಿಬಿಎಂಪಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ. ಅವುಗಳನ್ನು ತೆರವುಗೊಳಿಸಲು ಪ್ರತಿ ವಲಯಕ್ಕೂ ಏಜೆನ್ಸಿಗಳನ್ನು ಗೊತ್ತುಮಾಡಿ ತಿಂಗಳಲ್ಲೇ ಕಾರ್ಯಾಚರಣೆ ಆರಂಭಿಸಲಾಗುತ್ತದೆ’ ಎಂದು ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮೀನಾರಾಯಣ ತಿಳಿಸಿದರು.
ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಮಂಗಳವಾರ ಅನಧಿಕೃತ ಜಾಹೀರಾತು ಫಲಕಗಳಿಗೆ ಸಂಬಂಧಿಸಿದಂತೆ ತುರುಸಿನ ಚರ್ಚೆ ನಡೆದ ಬಳಿಕ ಅವರು ದೀರ್ಘ ಉತ್ತರ ನೀಡಿದರು.
‘ಯಡೆಯೂರು ವಾರ್ಡ್ ಸದಸ್ಯ ಎನ್.ಆರ್. ರಮೇಶ್ ಅವರು 21 ಸಾವಿರ ಅನಧಿಕೃತ ಜಾಹೀರಾತು ಫಲಕಗಳಿಗೆ ಸಂಬಂಧಿಸಿದಂತೆ ವಿವರ ಹಾಗೂ ದಾಖಲೆ ನೀಡಿದ್ದಾರೆ. ಅವುಗಳ ಚಿತ್ರೀಕರಣ ಮಾಡಿದ ಸಿ.ಡಿ ಸಹ ಕೊಟ್ಟಿದ್ದಾರೆ. ಇನ್ನೆರಡು ದಿನಗಳಲ್ಲಿ ಜಾಹೀರಾತು ವಿಭಾಗದ ಅಧಿಕಾರಿಗಳ ಸಭೆ ಕರೆದು ಆ ಸಿ.ಡಿ ತೋರಿಸಿ, ಪ್ರತಿ ವಲಯಕ್ಕೆ ಸಂಬಂಧಿಸಿದಂತೆ ಅನಧಿಕೃತ ಜಾಹೀರಾತು ಫಲಕಗಳ ಪಟ್ಟಿ ಸಿದ್ಧಪಡಿ-ಸಲಾಗುತ್ತದೆ’ ಎಂದು ವಿವರಿಸಿದರು.
‘ಪಟ್ಟಿ ಸಿದ್ಧವಾದ ಬಳಿಕ ಅದನ್ನು ಬಿಬಿಎಂಪಿ ವೆಬ್ಸೈಟ್ನಲ್ಲಿ ಪ್ರಕಟಿಸಿ, ಆಕ್ಷೇಪ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಆಕ್ಷೇಪಗಳ ವಿಲೇವಾರಿ ಬಳಿಕ ಅನಧಿಕೃತ ಜಾಹೀರಾತು ಫಲಕಗಳ ಅಂತಿಮ ಪಟ್ಟಿ ತಯಾರು ಮಾಡಲಾಗುತ್ತದೆ. ಈ ಎಲ್ಲ ಕೆಲಸ ಪೂರೈಸಲು ಒಂದು ತಿಂಗಳ ಕಾಲಾವಕಾಶ ಬೇಕಿದೆ. ಬಳಿಕ ತೆರವುಗೊಳಿಸುವ ಕಾರ್ಯಾಚರಣೆ ಶುರುವಾಗಲಿದೆ’ ಎಂದರು.
‘ಸದ್ಯದ ಸನ್ನಿವೇಶದಲ್ಲಿ ಜಾಹೀರಾತು ವಿಭಾಗದ ಅಧಿಕಾರಿಗಳು ಅನಧಿಕೃತ ಫಲಕಗಳನ್ನು ಸ್ಥಳದಲ್ಲಿ ಖುದ್ದು ಹಾಜರಿದ್ದು ತೋರಿಸಬೇಕು. ಅದನ್ನು ಏಜೆನ್ಸಿಯವರು ತೆರವುಗೊಳಿಸಬೇಕು. ಹೀಗಾಗಿ ದಿನಕ್ಕೆ ಒಂದು ಫಲಕ ತೆರವುಗೊಳಿಸಲು ಮಾತ್ರ ಸಾಧ್ಯವಾಗುತ್ತಿದೆ. ಈಗ ಅನಧಿಕೃತ ಫಲಕಗಳ ಪಟ್ಟಿಯೇ ಸಿಕ್ಕಿದ್ದರಿಂದ ನಿತ್ಯವೂ ಸಾಧ್ಯವಾದಷ್ಟು ಹೆಚ್ಚಿನ ಫಲಕ ತೆರವುಗೊಳಿಸಲಾಗುತ್ತದೆ’ ಎಂದರು.
ವಿಷಯ ಮಂಡಿಸಿದ ರಮೇಶ್, ‘8 ವಲಯಗಳ ಸುಮಾರು 3,800 ಕಿ.ಮೀ. ಉದ್ದದ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳಲ್ಲಿ 21 ಸಾವಿರಕ್ಕೂ ಅಧಿಕ ಅನಧಿಕೃತ ಜಾಹೀರಾತು ಫಲಕಗಳಿವೆ. ಪ್ರತಿಯೊಂದನ್ನೂ ವಿಡಿಯೊ ಚಿತ್ರೀಕರಣ ಮಾಡಿಸಿದ್ದೇನೆ. ಅವುಗಳಿಂದ ಜಾಹೀರಾತು ಶುಲ್ಕ ಸಂಗ್ರಹಿಸಿದರೆ ಬಿಬಿಎಂಪಿಗೆ ₨ 450 ಕೋಟಿ ಆದಾಯ ಬರುತ್ತದೆ’ ಎಂದು ಪ್ರತಿಪಾದಿಸಿದರು.
‘ಒಂದೊಂದು ಅನಧಿಕೃತ ಜಾಹೀರಾತು ಫಲಕ ತೆರವಿಗೂ ಅಧಿಕಾರಿಗಳು ₨ 1 ಲಕ್ಷ ಖರ್ಚು ಮಾಡಿದ್ದಾರೆ’ ಎಂದು ದೂರಿದರು. ‘ನಗರದಲ್ಲಿ ಕೇವಲ 2,260 ಜಾಹೀರಾತು ಫಲಕಗಳಿದ್ದು, ಅವುಗಳಲ್ಲಿ 1,017 ಮಾತ್ರ ಅನಧಿಕೃತವಾಗಿವೆ ಎಂಬ ಸುಳ್ಳು ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ. ಅವ್ಯವಹಾರದಲ್ಲಿ ಪಾಲ್ಗೊಂಡ ಈ ವಿಭಾಗದ ಅಧಿಕಾರಿಗಳನ್ನು ವಜಾ ಮಾಡಬೇಕು’ ಎಂದು ಒತ್ತಾಯಿಸಿದರು.
ಉತ್ತರ ನೀಡಿದ ಜಾಹೀರಾತು ವಿಭಾಗದ ಸಹಾಯಕ ಆಯುಕ್ತ ಮಂಜುನಾಥಸ್ವಾಮಿ, ‘ಕಂದಾಯ ಅಧಿಕಾರಿಗಳ ಮೂಲಕ ಸಮೀಕ್ಷೆ ನಡೆಸಿ ಪ್ರತಿ ವಲಯದ ಜಂಟಿ ಆಯುಕ್ತರು ನೀಡಿದ ಮಾಹಿತಿ ಆಧಾರದ ಮೇಲೆ ಈ ವರದಿ ಸಿದ್ಧಪಡಿಸಲಾಗಿದೆ. ನಮ್ಮ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಹೆಚ್ಚಾಗಿದೆ’ ಎಂದರು.
ಅನಧಿಕೃತ ಜಾಹೀರಾತು ಫಲಕಗಳಿಗೆ ಸಂಬಂಧಿಸಿದಂತೆ ಸೂಕ್ತ ಉತ್ತರ ನೀಡದ್ದರಿಂದ ಆಕ್ರೋಶಗೊಂಡ ಮೇಯರ್, ‘ನೀವು ಇಲ್ಲಿಂದ ಹೊರಟುಹೋಗಿ, ನಿಮ್ಮಂತಹ ಅಧಿಕಾರಿಗಳು ಬಿಬಿಎಂಪಿಗೆ ಏಕೆ ಬೇಕು’ ಎಂದು ದಬಾಯಿಸಿದರು.
ಜಯಮಹಲ್ ವಾರ್ಡ್ ಸದಸ್ಯ ಎಂ.ಕೆ ಗುಣಶೇಖರ್, ‘ಒಂದೆಡೆ ಅನಧಿಕೃತ ಜಾಹೀರಾತು ಫಲಕಗಳನ್ನು ಸಕ್ರಮ ಮಾಡುವ ಪ್ರಸ್ತಾವ ತರುತ್ತಾರೆ. ಇನ್ನೊಂದೆಡೆ ಅವುಗಳನ್ನು ಏಕೆ ತೆರವುಗೊಳಿಸಲಿಲ್ಲ ಎಂದು ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಡಳಿತ ಪಕ್ಷಕ್ಕೆ ಸೇರಿದ ನಾಗರಬಾವಿ ವಾರ್ಡ್ ಸದಸ್ಯ ಸದಸ್ಯ ಕೆ. ಉಮೇಶ್ ಶೆಟ್ಟಿ ಸಹ ಅದಕ್ಕೆ ದನಿಗೂಡಿಸಿದರು. ಇದರಿಂದ ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಬಿಜೆಪಿ ಸದಸ್ಯರು ಗುಂಪುಗೂಡಿ ಶೆಟ್ಟಿ ಅವರನ್ನು ತರಾಟೆಗೆ ತೆಗೆದುಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.