ಬೆಂಗಳೂರು: ‘ಬಳಕೆಯಲ್ಲಿರುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು (ಎ.ಐ) ನಿರ್ದಿಷ್ಟ ‘ಪ್ರೋಗ್ರಾಮ್’ ಆಧರಿಸಿರುವುದರಿಂದ ಉದ್ಯೋಗಾವಕಾಶಗಳ ನಷ್ಟದ ಭಯ ಪಡಬೇಕಾಗಿಲ್ಲ. ಶಿಕ್ಷಣ ಮತ್ತು ಉದ್ಯಮದ ನಡುವಿನ ಅಂತರದಿಂದಾಗಿ ಕೆಲವರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ’ ಎಂದು ವಿಜ್ಞಾನ ಲೇಖಕ ಉದಯ ಶಂಕರ ಪುರಾಣಿಕ್ ತಿಳಿಸಿದರು.
ಇನ್ಸ್ಟಿಟ್ಯೂಟ್ ಆಫ್ ಮೀಡಿಯಾ ಸ್ಟಡೀಸ್ ಆ್ಯಂಡ್ ರಿಸರ್ಚ್ (ಐಎಂಎಸ್ಆರ್) ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಪ್ರಜಾವಾಣಿ’ಯ ಚಿಕ್ಕಮಗಳೂರು ಜಿಲ್ಲಾ ವರದಿಗಾರ ಎಸ್.ಕೆ.ವಿಜಯಕುಮಾರ್ ಅವರಿಗೆ ‘ಬಿ.ಆರ್. ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಈ ವೇಳೆ ಮಾತನಾಡಿದ ಉದಯ ಶಂಕರ ಪುರಾಣಿಕ್ ಅವರು, ‘ಎ.ಐ ತಂತ್ರಜ್ಞಾನದ ಬಳಕೆಯಿಂದ ಉದ್ಯೋಗ ಕಳೆದುಕೊಳ್ಳುವ ಆತಂಕ ಕೆಲವರಲ್ಲಿದೆ. ವಾಸ್ತವದಲ್ಲಿ ಈ ತಂತ್ರಜ್ಞಾನವು ಉದ್ಯೋಗ ನಷ್ಟಕ್ಕೆ ಕಾರಣವಾಗುವುದಿಲ್ಲ. ಈಗ ಬಳಕೆಯಲ್ಲಿರುವ ಎ.ಐ ತಂತ್ರಜ್ಞಾನವು ‘ಪ್ರೋಗ್ರಾಮ್’ಗೆ ಅನುಗುಣವಾಗಿ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಣ ಸಂಸ್ಥೆಗಳು ಉದ್ಯಮದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಿರುವ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ವೃದ್ಧಿಸಬೇಕು’ ಎಂದು ಹೇಳಿದರು.
ಕಾಡುತ್ತಿದೆ ಹಸಿವು, ಬಡತನ: ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ಕೆ.ಪಿ.ಕೃಷ್ಣಪ್ರಸಾದ್ ಅವರು, ‘ದೇಶವನ್ನು ಹಸಿವು, ಬಡತನ, ಅಸಮಾನತೆಯಂತಹ ಸಮಸ್ಯೆಗಳು ಕಾಡುತ್ತಿವೆ ಎಂದು ಅಭಿಪ್ರಾಯಪಟ್ಟರು.
’ದೇಶದ ಜಿಡಿಪಿ ಶೇ 8.2ರಷ್ಟು ತಲುಪಿದೆಯೆಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ, ನಮ್ಮ ತಲಾ ಆದಾಯ ಕೇವಲ ₹ 2 ಲಕ್ಷ ಮಾತ್ರ. ಚೀನಾದ ತಲಾ ಆದಾಯ ಇದಕ್ಕಿಂತ ಆರು ಪಟ್ಟು ಹೆಚ್ಚಿದೆ. ನಮ್ಮ ದೇಶದಲ್ಲಿ 85 ಕೋಟಿ ಜನರಿಗೆ ಪಡಿತರ ಸಿಗುತ್ತಿದೆ. ಇದು ದೇಶದ ಹಸಿವು ಮತ್ತು ಬಡತನವನ್ನು ತೋರಿಸುತ್ತದೆ’ ಎಂದು ಹೇಳಿದರು.
ಪ್ರಶಸ್ತಿ ಪುರಸ್ಕೃತ ಎಸ್.ಕೆ.ವಿಜಯಕುಮಾರ್ ಅವರು ತಮ್ಮ ಹಳೆಯ ದಿನಗಳನ್ನು ಸ್ಮರಿಸಿಕೊಂಸರು. ಪ್ರಶಸ್ತಿಯ ನಗದು ₹ 5 ಸಾವಿರವನ್ನು ಸಂಸ್ಥೆಗೇ ಮರಳಿಸಿದರು.