ಬೆಂಗಳೂರು: ಸಿಗರೇಟ್ ಮತ್ತು ಮಾಸ್ಕ್ ಲಂಚ ಪ್ರಕರಣದ ಆರೋಪಿಗಳಾದ ಸಿಸಿಬಿ ಇನ್ಸ್ಪೆಕ್ಟರ್ ಅಜಯ್ ಹಾಗೂ ನಿರಂಜನಕುಮಾರ್ ಅವರಿಗೂ ಇಲ್ಲಿನ ಲೋಕಾಯುಕ್ತ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.
ಎಸಿಪಿ ಪ್ರಭುಶಂಕರ್ಗೂ ನಿರೀಕ್ಷಣಾ ಜಾಮೀನು ಸಿಕ್ಕಿದ್ದು, ಈ ಅಧಿಕಾರಿಗಳು ಎಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಶುಕ್ರವಾರ ಅನಾರೋಗ್ಯ ಕಾರಣದಿಂದ ಮಧ್ಯದಲ್ಲೇ ನಿರ್ಗಮಿಸಿದ್ದ ಎಸಿಪಿ ಶನಿವಾರವೂ ವಿಚಾರಣೆ ಎದುರಿಸಿದರು.
ಸಿಗರೇಟ್ ವಿತರಕರು ಹಾಗೂ ನಕಲಿ ಮಾಸ್ಕ್ ತಯಾರಿಕರಿಂದ ಲಂಚ ಪಡೆದ ಕುರಿತು ತನಿಖಾಧಿಕಾರಿಗಳು ಎಸಿಪಿ ಅವರನ್ನು ಪ್ರಶ್ನಿಸಿದರು.
ಕಳೆದ ವಾರ ಪ್ರಭುಶಂಕರ್ ಮನೆಯ ಮೇಲೆ ದಾಳಿ ನಡೆಸಿದ ವೇಳೆ ಸಿಕ್ಕಿದ ಡೈರಿಯಲ್ಲಿರುವ ಮಾಹಿತಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಅದರಲ್ಲಿರುವ ಕೆಲ ಹೆಸರುಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ, ತಮ್ಮ ವಿರುದ್ಧ ಎಸಿಬಿಯಲ್ಲಿ ಹಾಗೂ ಕಾಟನ್ಪೇಟೆ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಎಸಿಪಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.