ಹೈದರಾಬಾದ್: ಕಾಮರೆಡ್ಡಿ ಜಿಲ್ಲೆಯ ಭಿಕ್ನೂರ್ ಗ್ರಾಮದ ಗದ್ದೆಯೊಂದರಲ್ಲಿ ತಂಗಲು ಟೆಂಟ್ ಹಾಕಿಕೊಂಡಿದ್ದ ರಷ್ಯಾದ ಪ್ರವಾಸಿಗನನ್ನು ಕಳ್ಳನೆಂದು ಭಾವಿಸಿದ ರೈತ ಥಳಿಸಿದ್ದಾರೆ.
ಮಾಸ್ಕೊದ ವಿ ಓಲೆಗ್ (45) ಸೈಕಲ್ನಲ್ಲಿ ಪ್ರಪಂಚ ಪರ್ಯಟನೆ ಮಾಡುತ್ತಿದ್ದರು. ಶಿರಡಿಗೆ ಹೊರಟ ಅವರು ದಾರಿ ಮಧ್ಯೆ ಮಹೇಂದ್ರ ರೆಡ್ಡಿ ಎಂಬುವವರ ಜಮೀನಿನಲ್ಲಿ ರಾತ್ರಿ ಟೆಂಟ್ ಹಾಕಿಕೊಂಡಿದ್ದರು.
ಕಳ್ಳ ಇರಬಹುದು ಎಂದು ಭಾವಿಸಿ ಓಲೆಗ್ ಅವರ ಮೇಲೆ ಮಹೇಂದ್ರ ರೆಡ್ಡಿ ಹಲ್ಲೆ ನಡೆಸಿದ್ದಾರೆ. ಅವರ ತಲೆ, ದವಡೆ ಹಾಗೂ ಬಲಗೈಗೆ ಗಾಯವಾಗಿದ್ದು, ಹೈದರಾಬಾದ್ನ ಉಸ್ಮಾನಿಯಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತೆಲಂಗಾಣದಲ್ಲಿ ಶುಕ್ರವಾರ ರಾತ್ರಿ ಮಳೆ ಸುರಿಯುತ್ತಿತ್ತು. ಸೈಕಲ್ನಲ್ಲಿ ಪ್ರವಾಸ ಮುಂದುವರೆಸಲು ಸಾಧ್ಯವಾಗದೆ ರಾಷ್ಟ್ರೀಯ ಹೆದ್ದಾರಿ ಸಮೀಪದ ಜಮೀನಿನಲ್ಲಿ ಓಲೆಗ್ ಟೆಂಟ್ ಹಾಕಿಕೊಂಡಿದ್ದರು. ಮಳೆ ನಂತರ ಬೆಳೆಗೆ ಏನಾದರೂ ಹಾನಿಯಾಗಿದೆಯೇ ಎಂದು ನೋಡಲು ಬಂದ ರೈತ, ಟೆಂಟ್ನಲ್ಲಿದ್ದ ರಷ್ಯಾ ಪ್ರವಾಸಿಯನ್ನು ಕಳ್ಳನೆಂದು ತಪ್ಪುತಿಳಿದುಕೊಂಡಿದ್ದರು.