ಬೆಂಗಳೂರು: ಬೆಳ್ಳಂದೂರು ಕೆರೆಯನ್ನು ಅಭಿವೃದ್ಧಿಪಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) ಹಾಗೂ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ನೆರವು ಪಡೆಯಲು ಮುಂದಾಗಿದೆ.
ಬೆಳ್ಳಂದೂರು ಕೆರೆಯೂ ಸೇರಿದಂತೆ ಬಿಡಿಎ ಅಧೀನದ ಕೆರೆಗಳ ಪುನಶ್ಚೇತನಕ್ಕೆ ಹಾಗೂ ನಿರ್ವಹಣೆಗೆ ಬಿಐಎಎಲ್ ಹಾಗೂ ಸಿಐಐ ನೆರವಾಗಲಿವೆ.
ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಅವರು ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಹರಿ ಕೆ.ಮರಾರ್ ಮತ್ತು ಸಿಐಐನ ಕರ್ನಾಟಕ ವಿಭಾಗದ ಮುಖ್ಯಸ್ಥ ನೇಲ್ ಕ್ಯಾಸ್ಟ್ರಿನೊ ಅವರೊಂದಿಗೆ ಭಾನುವಾರ ಬೆಳ್ಳಂದೂರು ಕೆರೆಯನ್ನು ವೀಕ್ಷಿಸಿದರು.
ತೂಬು, ತ್ಯಾಜ್ಯನೀರು ಸಂಸ್ಕರಣ ಘಟಕದ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು. ಜೌಗು ಪ್ರದೇಶ ನಿರ್ಮಾಣ ಮತ್ತು ನಿರ್ವಹಣೆಯ ಕುರಿತು ಚರ್ಚಿಸಿದರು.
‘ನಮ್ಮ ಅಧೀನದ ಕೆರೆಗಳ ಸಂರಕ್ಷಣೆಗೆ ವಿವಿಧ ಸಂಸ್ಥೆಗಳ ಸಹಭಾಗಿತ್ವ ಹೊಂದಲು ನಿರ್ಧರಿಸಿದ್ದೇವೆ. ಕೆರೆಗಳ ನಿರ್ವಹಣೆಗೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಸೂಕ್ತ ವ್ಯವಸ್ಥೆ ರೂಪಿಸಲಿದ್ದೇವೆ’ ಎಂದು ರಾಕೇಶ್ ಸಿಂಗ್ ತಿಳಿಸಿದರು.