ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಉದ್ಯಮಿ ಹತ್ಯೆ: 9 ಮಂದಿ ಸೆರೆ

ಹಣಕಾಸು ವಿಚಾರ, ಹಳೇ ದ್ವೇಷದಿಂದ ಕೊಲೆ
Published 11 ಮೇ 2024, 23:53 IST
Last Updated 11 ಮೇ 2024, 23:53 IST
ಅಕ್ಷರ ಗಾತ್ರ

ಬೆಂಗಳೂರು: ಹಣಕಾಸಿನ ವಿಚಾರ ಹಾಗೂ ಹಳೇ ದ್ವೇಷದಿಂದ ರಿಯಲ್ ಎಸ್ಟೇಟ್ ಉದ್ಯಮಿಯನ್ನು ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಥಳಿಸಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಬಾಣಸವಾಡಿ ಠಾಣೆ ಪೊಲೀಸರು, 9 ಮಂದಿಯನ್ನು ಬಂಧಿಸಿದ್ದಾರೆ.

ಬಾಣಸವಾಡಿ ನಿವಾಸಿಗಳಾದ ಧರ್ಮ, ಇಶಾಕ್, ಸುಲ್ತಾನ್, ಗೋಕುಲ್, ಬಸವರಾಜು, ಜಾನ್ ಡೇವಿಡ್, ಸೀನಾ, ಪವನ್ ಮತ್ತು ಅರಸು ಬಂಧಿತರು. ಈ ಪೈಕಿ ಧರ್ಮ, ಜಾನ್ ಡೇವಿಡ್, ಸೀನಾ ಬಾಣಸವಾಡಿ ಠಾಣೆಯ ರೌಡಿಶೀಟರ್‌ಗಳಾಗಿದ್ದಾರೆ ಎಂದು ಪೊಲೀಸರು ಹೇಳಿದರು.

ಪ್ರಮುಖ ಆರೋಪಿ ಮಂಜುನಾಥ್ ಅಲಿಯಾಸ್ ಮಂಜು ಎಂಬಾತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಗಳು ಮೇ 7ರಂದು ಕಾರ್ತಿಕೇಯನ್ (40) ಎಂಬಾತನನ್ನು ಕೊಲೆ ಮಾಡಿ ಪರಾರಿ ಆಗಿದ್ದರು. 

‘ಬಂಧಿತರು ಹಾಗೂ ಕೊಲೆಯಾದ ಕಾರ್ತೀಕೇಯನ್‌ ನಡುವೆ ಹಣಕಾಸು ಹಾಗೂ ವೈಯಕ್ತಿಕ ವಿಚಾರಕ್ಕೆ ಹಳೇ ದ್ವೇಷವಿತ್ತು. ಹಲವು ಬಾರಿ ಗಲಾಟೆ ನಡೆದಿತ್ತು. ಮೇ 7ರಂದು ರಾತ್ರಿ 7 ಗಂಟೆ ಸುಮಾರಿಗೆ ಕಾರ್ತಿಕೇಯನ್ ಮನೆ ಸಮೀಪ ವಾಯುವಿಹಾರ ನಡೆಸುತ್ತಿದ್ದ. ಆಗ, ಬೈಕ್‌ಗಳಲ್ಲಿ ಬಂದಿದ್ದ ಆರೋಪಿಗಳು ಕೃತ್ಯ ಎಸಗಿದ್ದರು. ಕೊಲೆಯಾದ ಕಾರ್ತಿಕೇಯನ್ ವಿರುದ್ಧವೂ ಈ ಹಿಂದೆ ಬಾಣಸವಾಡಿ ಮತ್ತು ಕಮರ್ಷಿಯಲ್ ಸ್ಟ್ರೀಟ್ ಠಾಣೆಯ ರೌಡಿಪಟ್ಟಿ ತೆರೆಯಲಾಗಿತ್ತು. ಎರಡು ವರ್ಷಗಳ ಹಿಂದೆ ಕೋರ್ಟ್ ಮೂಲಕ ಕಾರ್ತಿಕೇಯನ್ ಅದನ್ನು ರದ್ದು ಪಡಿಸಿಕೊಂಡಿದ್ದ. ಬಳಿಕ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಿಕೊಂಡು ಜೀವನ ನಡೆಸುತ್ತಿದ್ದ’ ಎಂದು ಮೂಲಗಳು ಹೇಳಿವೆ.

‘ಈಚೆಗೆ ಕೆಲ ವಿವಾದಿತ ಜಾಗಗಳಿಗೆ ಬೇಲಿ ಹಾಕಿದ್ದ ಕಾರ್ತಿಕೇಯನ್, ಆರೋಪಿ ಮಂಜು, ಆತನ ಸಹಚರರ ಜತೆ ಜಗಳ ಮಾಡಿಕೊಂಡಿದ್ದ. ಗನ್ ತೋರಿಸಿ ಮಂಜುಗೆ ಬೆದರಿಕೆ ಹಾಕಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಗಳು ಸಂಚು ರೂಪಿಸಿ ಕೊಲೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT