ಬೆಂಗಳೂರು: ಯಶವಂತಪುರ ಮೆಟ್ರೊ ನಿಲ್ದಾಣ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳಿಗ್ಗೆ ಕೆಎಸ್ಆರ್ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದ್ದು, ರಾಜೇಂದ್ರ (54) ಅವರು ಮೃತಪಟ್ಟಿದ್ದಾರೆ.
‘ನಾಗಸಂದ್ರ ನಿವಾಸಿ ರಾಜೇಂದ್ರ, ನೆಲಮಂಗಲ ಬಳಿಯ ಕಂಪನಿಯೊಂದರ ಲೆಕ್ಕಾಧಿಕಾರಿ. ಕೆಲಸ ನಿಮಿತ್ತ ಮೇಖ್ರಿ ವೃತ್ತದಲ್ಲಿರುವ ಜಿಎಸ್ಟಿ ಕಚೇರಿಗೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ’ ಎಂದು ಯಶವಂತಪುರ ಸಂಚಾರ ಪೊಲೀಸರು ಹೇಳಿದರು.
‘ನಾಗಸಂದ್ರದ ಮನೆಯಿಂದ ಮೇಖ್ರಿ ವೃತ್ತದ ಕಡೆಗೆ ರಾಜೇಂದ್ರ ಹೊರಟಿದ್ದರು. ತುರುವೇಕೆರೆಯಿಂದ ಬೆಂಗಳೂರಿಗೆ ಕೆಎಸ್ಆರ್ಟಿಸಿ ಬಸ್ ಬರುತ್ತಿತ್ತು. ಯಶವಂತಪುರ ಮೆಟ್ರೊ ನಿಲ್ದಾಣ ಬಳಿ ದ್ಚಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಹೊಡೆದಿತ್ತು.’
‘ದ್ವಿಚಕ್ರ ವಾಹನ ಸಮೇತ ಬಿದ್ದಿದ್ದ ರಾಜೇಂದ್ರ ಅವರನ್ನು 30 ಮೀಟರ್ವರೆಗೂ ಬಸ್ ಎಳೆದೊಯ್ದಿತ್ತು. ಇದರಿಂದಾಗಿ ರಾಜೇಂದ್ರ ಅವರ ತಲೆ, ಹೊಟ್ಟೆ, ಎದೆಗೆ ತೀವ್ರ ಪೆಟ್ಟಾಗಿತ್ತು. ಅವರು ಸ್ಥಳದಲ್ಲೇ ಮೃತಪಟ್ಟರು’ ಎಂದು ಪೊಲೀಸರು ತಿಳಿಸಿದರು.
‘ಕೆಎಸ್ಆರ್ಟಿಸಿ ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ತುರುವೇಕೆರೆ ಡಿಪೊ ಚಾಲಕ ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಬಸ್ ಜಪ್ತಿ ಮಾಡಲಾಗಿದೆ’ ಎಂದರು.