ಬೆಂಗಳೂರು: ಹೈಕೋರ್ಟನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಪತ್ರ ಬರೆದಿದ್ದ ಆರೋಪದಡಿ ಉತ್ತರ ಪ್ರದೇಶದ ರಾಜೇಂದ್ರ ಸಿಂಗ್ ಎಂಬಾತನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.
ತನ್ನ ಮಾವ ಹರಿದರ್ಶನ್ ಸಿಂಗ್ ಅವರನ್ನು ಸಿಕ್ಕಿಸುವ ಉದ್ದೇಶದಿಂದ ಆರೋಪಿ ಅವರ ಹೆಸರಿನಲ್ಲಿ ಹೈಕೋರ್ಟಗೆ ಬೆದರಿಕೆ ಪತ್ರ ಕಳುಹಿಸಿದ್ದ. ಚೆನ್ನೈ ಹೈಕೋರ್ಟಗೂ ಬೆದರಿಕೆ ಪತ್ರ ಕಳುಹಿಸಿದ್ದ. ಚೆನ್ನೈ ಪೊಲೀಸರು ಆತನನ್ನು ಬಂಧಿಸಿದ್ದರು. ಬಾಡಿ ವಾರೆಂಟ್ ಮೇಲೆ ಆತನನ್ನು ಕಸ್ಟಡಿಗೆ ಪಡೆದು ನಗರಕ್ಕೆ ಕರೆತರಲಾಗಿದೆ.
'ನಾನು ಅಂತಾರಾಷ್ಟ್ರೀಯ ಖಲಿಸ್ತಾನ್ ಗುಂಪಿಗೆ ಸೇರಿದ ವ್ಯಕ್ತಿ.. ನಾನು, ನನ್ನ ಮಗ ಈ ದಾಳಿ ನಡೆಸುತ್ತೇವೆ' ಎಂದು ಬೆದರಿಕೆ ಪತ್ರದಲ್ಲಿ ಆರೋಪಿ ರಾಜೇಂದ್ರ ಹೇಳಿದ್ದ.
'ತನ್ನ ಪತ್ನಿಯನ್ನು ಮಾವ ತವರು ಮನೆಗೆ ಕರೆದೊಯ್ದಿದ್ದ. ಅದರಿಂದ ಸಿಟ್ಟಾದ ಆರೋಪಿ, ಮಾವನನ್ನು ಸಿಕ್ಕಿಸಲು ಈ ರೀತಿ ಪತ್ರ ಬರೆದಿದ್ದ' ಎಂದು ಪೊಲೀಸರು ಹೇಳಿದರು.