ಬೆಂಗಳೂರು: ಬಹುಜನ ಸಮಾಜ ಪಕ್ಷದ ನಾಯಕ ಕಾನ್ಷಿರಾಮ್ ಅವರ 89ನೇ ಜಯಂತಿ ಅಂಗವಾಗಿ ಸಂವಿಧಾನ ರಕ್ಷಣೆ ಮತ್ತು ಬಹುಜನರ ಹಕ್ಕುಗಳ ಸುರಕ್ಷತೆಗಾಗಿ ವಿಭಾಗೀಯ ಮಟ್ಟದ ಸಮಾವೇಶವನ್ನು ಬಿಎಸ್ಪಿ ನಗರದಲ್ಲಿ ಶುಕ್ರವಾರ ಆಯೋಜಿಸಿದೆ.
ಸ್ವಾತಂತ್ರ್ಯ ಉದ್ಯಾನದಲ್ಲಿ ಬೆಳಿಗ್ಗೆ 11ಕ್ಕೆ ಸಮಾವೇಶ ನಡೆಯಲಿದ್ದು, ಪಕ್ಷದ ರಾಜ್ಯ ಸಂಯೋಜಕರಾದ ಮಾರಸಂದ್ರ ಮುನಿಯಪ್ಪ, ಎಂ.ಗೋಪಿನಾಥ್, ಸುರೇಂದ್ರ ಸಿಂಗ್ ಕಲೋರಿಯಾ, ದಿನೇಶ್ ಗೌತಮ್, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಇತರರು ಭಾಗವಹಿಸುವರು.
‘ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಪಾಟೀಲ ಮತ್ತು ಹುಮನಾಬಾದ್ ತಹಶೀಲ್ದಾರ್ ಪ್ರದೀಪ್ ಕುಮಾರ್ ಹಿರೇಮಠ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಸ್ಸಿ/ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಸಂಬಂಧ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಆಯೋಗದ ವರದಿ ಜಾರಿಗೊಳಿಸಬೇಕು. ಎಸ್ಸಿ/ಎಸ್ಟಿ ನೌಕರರ ಮುಂಬಡ್ತಿ ಮೀಸಲಾತಿ ರಕ್ಷಣೆ ಮಾಡಬೇಕು. ಎಲ್ಲ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ, ಖಾಸಗಿ ಕ್ಷೇತ್ರದಲ್ಲಿ ಒಬಿಸಿ ಮತ್ತು ಎಸ್ಸಿ/ಎಸ್ಟಿ ಸಮುದಾಯದವರಿಗೆ ಮೀಸಲಾತಿ, ಪಿಟಿಸಿಎಲ್ ಕಾಯ್ದೆಯ ಸಮಗ್ರ ತಿದ್ದುಪಡಿ, ಬಗರ್ ಹುಕುಂ ಸಾಗುವಳಿ ಸಕ್ರಮ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಮಾವೇಶ ನಡೆಸಲಾಗುತ್ತಿದೆ’ ಎಂದು ಬಿಎಸ್ಪಿ ತಿಳಿಸಿದೆ.