ಬೆಂಗಳೂರು: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆ ಮತ್ತು ಕಚೇರಿ ಮೇಲೆ ಸಿಬಿಐ ದಾಳಿ ಮಾಡಿಸಿ, ಉಪಚುನಾವಣೆ ಗೆಲ್ಲುವ ಅಗತ್ಯವಿಲ್ಲ’ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಿಬಿಐ ಸ್ವಾಯತ್ತ ಸಂಸ್ಥೆಯಾಗಿದ್ದು, 2017 ಮತ್ತು 2019 ರಲ್ಲಿ ಅವರ ವಿರುದ್ಧದ ಪ್ರಕರಣಗಳ ಮುಂದುವರಿದ ಭಾಗವಾಗಿ ಶೋಧ ನಡೆದಿದೆ. ಬಿಜೆಪಿಗೂ ಈ ದಾಳಿಗೂ ಸಂಬಂಧವಿಲ್ಲ’ ಎಂದರು.
‘ಹಿಂದೆ ಯುಪಿಎ ಸರ್ಕಾರ ಇದ್ದಾಗ ಜನಾರ್ದನ ರೆಡ್ಡಿ ಅವರ ಮನೆ, ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಮತ್ತು ಇತರ ತನಿಖಾ ಸಂಸ್ಥೆಗಳು ದಾಳಿ ನಡೆಸಿದವು. ಅದನ್ನು ಕಾಂಗ್ರೆಸ್ ಪಕ್ಷವೇ ಮಾಡಿಸಿದ್ದು ಎಂದು ಹೇಳಲು ಆಗುತ್ತದೆಯೇ’ ಎಂದು ಅಶೋಕ ಪ್ರಶ್ನಿಸಿದರು.
‘ಶಿರಾ ಉಪಚುನಾವಣೆಯಲ್ಲಿ ಆರ್ಎಸ್ಎಸ್ನವರು ₹50 ಕೋಟಿ ಖರ್ಚು ಮಾಡಲು ಸಿದ್ಧತೆ ನಡೆಸಿದ್ದಾರೆ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ದೂರಿದ್ದಾರೆ. ಅವರ ಮಾತಿನಲ್ಲಿ ಯಾವುದೇ ಹುರುಳಿಲ್ಲ. ಆರ್ಎಸ್ಎಸ್ ಒಂದು ಸೇವಾ ಸಂಘಟನೆಯೇ ಹೊರತು ರಾಜಕೀಯ ಸಂಘಟನೆಯಲ್ಲ’ ಎಂದು ಅವರು ಹೇಳಿದರು.