ಬೆಂಗಳೂರು: ‘ಪಶ್ಚಿಮ ವಿಭಾಗದ ಯಾವುದೇ ಪೊಲೀಸರು, ಹಫ್ತಾ ವಸೂಲು ಮಾಡುವುದು ಕಂಡು ಬಂದರೆ ನನ್ನ ಮೊಬೈಲ್ಗೆ ಕರೆ ಮಾಡಿ ತಿಳಿಸಿ. ಕಚೇರಿಗೂ ಬಂದು ಮಾಹಿತಿ ನೀಡಿ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣನವರ ತಿಳಿಸಿದ್ದಾರೆ.
‘ಕೆ.ಆರ್.ಮಾರುಕಟ್ಟೆಯ ವ್ಯಾಪಾರಿಗಳ ಬಳಿ ಪೊಲೀಸರು ಹಫ್ತಾ ವಸೂಲಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಸಾರ್ವಜನಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ ವಿಡಿಯೊ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
‘ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೊ ಬಗ್ಗೆ ಚಿಕ್ಕಪೇಟೆ ಎಸಿಪಿಯವರು ತನಿಖೆ ನಡೆಸಿ ವರದಿ ಕೊಟ್ಟಿದ್ದಾರೆ. ಹಣ್ಣು ವ್ಯಾಪಾರಿ ಇಸ್ಮಾಯಿಲ್ ಎಂಬುವರು ಖಾಸಗಿ ಸೆಕ್ಯುರಿಟಿ ಚಂದ್ರಪ್ಪ ಎಂಬುವರಿಗೆ ₹10 ಕೊಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ಆ ಸೆಕ್ಯುರಿಟಿಯೇ ಪೊಲೀಸ್ ಕಾನ್ಸ್ಟೆಬಲ್ ಎಂದು ತಪ್ಪಾಗಿ ಅರ್ಥೈಸಿ ವಿಡಿಯೊವನ್ನು ಹರಿಬಿಡಲಾಗಿದೆ’ ಎಂದು ಚನ್ನಣ್ಣನವರ ತಿಳಿಸಿದ್ದಾರೆ.
ಹಫ್ತಾ ವಸೂಲಿ ಬಗ್ಗೆ ಮಾಹಿತಿ ನೀಡಲು:ಮೊ. 94808 01701, 94808 01700, ದೂ. 080–22942356/3232 ಸಂಪರ್ಕಿಸಬಹುದು.