ಬೆಂಗಳೂರು: ತಲಘಟ್ಟಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿರುವ ಗುರು ಸಿದ್ದೇಶ್ವರ ಚಿತ್ರಮಂದಿರ ಬಳಿ ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಹಿಂಬದಿ ಸವಾರ ರಾಜು ಹುಸೇನ್ (32) ಎಂಬುವವರು ಮೃತಪಟ್ಟಿದ್ದಾರೆ.
‘ಅಸ್ಸಾಂನ ರಾಜು, ಅಂಜನಾಪುರದಲ್ಲಿ ವಾಸವಿದ್ದರು. ವೆಲ್ಡಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಸಹೋದ್ಯೋಗಿ ದಾದಾಪೀರ್ ಎಂಬುವವರ ಜೊತೆ ಬೈಕ್ನಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಪೊಲೀಸರು ಹೇಳಿದ್ದಾರೆ.
‘ಭಾನುವಾರ ರಾತ್ರಿ ಕಾರು ಹಾಗೂ ಬೈಕ್ ಪರಸ್ಪರ ಡಿಕ್ಕಿಯಾಗಿ, ಅಪಘಾತ ಸಂಭವಿಸಿತ್ತು. ಬೈಕ್ ಸಮೇತ ದಾದಾಪೀರ್ ಹಾಗೂ ರಾಜು ಹುಸೇನ್ ರಸ್ತೆಗೆ ಬಿದ್ದಿದ್ದರು. ತೀವ್ರ ಗಾಯಗೊಂಡ ರಾಜು ಹುಸೇನ್ ಸ್ಥಳದಲ್ಲೇ ಮೃತಪಟ್ಟರು. ಗಾಯಗೊಂಡಿರುವ ದಾದಾಪೀರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದಿದ್ದಾರೆ.
‘ಕಾರು ಚಾಲಕನ ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದ್ದಾರೆ.