ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | 110 ಹಳ್ಳಿಗಳಿಗೆ ಕಾವೇರಿ ನೀರು: ಹೈಡ್ರೊ ಟೆಸ್ಟ್‌ ಆರಂಭಿಸಿದ ಜಲಮಂಡಳಿ

Published 28 ಮೇ 2024, 4:37 IST
Last Updated 28 ಮೇ 2024, 4:37 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿ 5ನೇ ಹಂತದ ಯೋಜನೆ ಅಂತಿಮಘಟ್ಟ ತಲುಪಿದ್ದು, 110 ಹಳ್ಳಿಗಳಿಗೆ ನೀರು ಪೂರೈಸಲು ‘ಹೈಡ್ರೊ ಟೆಸ್ಟ್‌’ ಅನ್ನು ಜಲಮಂಡಳಿ ಆರಂಭಿಸಿದೆ.

ಈ ಪರೀಕ್ಷೆ ಮುಗಿದ ಮೇಲೆ, ಯೋಜನೆಗೆ ಹಣಕಾಸು ಒದಗಿ ಸುತ್ತಿರುವ ಜಪಾನ್‌ ಅಂತರರಾಷ್ಟ್ರೀಯ ಸಹಕಾರ ಏಜೆನ್ಸಿ (ಜೆಐಸಿಎ) ಪರಿಶೀಲನೆ ನಡೆಸಲಿದೆ. ಜೂನ್‌ ಮಧ್ಯಭಾಗದಲ್ಲಿ ನೀರು ಸರಬರಾಜು ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್‌ಪ್ರಸಾತ್‌ ಮನೋಹರ್‌ ತಿಳಿಸಿದರು.

2016ರಲ್ಲಿ ಯೋಜನೆಗೆ ಅನು ಮೋದನೆ ದೊರೆತಿದ್ದು, ಕೋವಿಡ್‌ ನಿಂದ ಕಾಮಗಾರಿ ವಿಳಂಬವಾಯಿತು. ಕಾವೇರಿ 5ನೇ ಹಂತದ ಯೋಜನೆಯಲ್ಲಿ 775 ಎಂಎಲ್‌ ನೀರನ್ನು 2,800 ಕಿ.ಮೀ ಕೊಳವೆ ಮಾರ್ಗದಲ್ಲಿ ಜಲಮಂಡಳಿ ಪೂರೈಸಲಿದೆ.

ಸಮೀಕ್ಷೆ: ‘ನಗರದಲ್ಲಿ ಎಷ್ಟು ಮಂದಿ ನಾಗರಿಕರು ಸಂಪೂರ್ಣವಾಗಿ ಕಾವೇರಿ ನೀರಿನ ಮೇಲೆ ಅವಲಂಬಿತರಾಗಿದ್ದಾರೆ ಎಂಬ ಸಮೀಕ್ಷೆ ನಡೆಸಲಾಗುವುದು’ ಎಂದು ರಾಮ್‌ಪ್ರಸಾತ್‌ ತಿಳಿಸಿದರು.

‘ಎಷ್ಟು ಸಂಪರ್ಕಗಳಿವೆ, ಎಷ್ಟು ನೀರು ಬಳಕೆಯಾಗುತ್ತಿದೆ ಎಂಬ ಮಾಹಿತಿ ಇದೆ. ಅವರೆಲ್ಲರೂ ಕಾವೇರಿ ನೀರನ್ನೇ ಅವಲಂಬಿಸಿದ್ದಾರೆಯೇ? ಗೃಹ ಬಳಕೆಯ ಕೊಳವೆಬಾವಿಗಳೆಷ್ಟು? ಎಂಬ ಮಾಹಿತಿಯನ್ನು ಪಡೆಯಲಾಗುವುದು’ ಎಂದರು.

‘ಈ ಸಮೀಕ್ಷೆ ಮುಂದಿನ ದಿನಗಳಲ್ಲಿ ಸಂಕಷ್ಟವನ್ನು ನಿರ್ವಹಿಸಲು ನೆರ ವಾಗಲಿದೆ. ಎಐ–ಆಧಾರಿತ ವ್ಯವಸ್ಥೆಯನ್ನು ನೀರು ಪೂರೈಕೆಯಲ್ಲಿ ಅಳವಡಿ ಸಿಕೊಳ್ಳಲೂ ಈ ಸಮೀಕ್ಷೆಯಿಂದ ಹೊರಬರುವ ದತ್ತಾಂಶ ನೆರವಾಗಲಿದೆ’ ಎಂದು ತಿಳಿಸಿದರು.

ದಂಡ ಅಭಿಯಾನ: ಮಳೆನೀರನ್ನು ನೇರವಾಗಿ ಒಳಚರಂಡಿಗೆ ಸೇರಿಸಿ ರುವವರ ಮೇಲೆ ‘ದಂಡ ಅಭಿಯಾನ’ ನಡೆಸಲು ಜಲಮಂಡಳಿಯು ನಿರ್ಧರಿಸಿದೆ.

ಮಳೆ ನೀರು ಸಂಗ್ರಹ ಪದ್ದತಿಯ ಅಳವಡಿಕೆಯ ಮೂಲಕ ನೀರಿನ ಸದ್ಬಳಕೆ ಕಡ್ಡಾಯವಾಗಿದೆ. ಹಲವಾರು ಕಡೆಗಳಲ್ಲಿ ಮಳೆನೀರನ್ನು ನೇರವಾಗಿ ಒಳಚರಂಡಿಗೆ ಬಿಡಲಾಗುತ್ತಿದೆ. ಇದರಿಂದ ಒಳಚರಂಡಿ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಮಳೆ ನೀರು ಇಂಗಿಸುವುದನ್ನು ಪ್ರೋತ್ಸಾಹಿಸಬೇಕು. ಹೀಗಾಗಿ, ಒಳಚರಂಡಿಗೆ ಮಳೆ ನೀರು ಹರಿಸುವವರಿಗೆ ದಂಡ ವಿಧಿಸಿ ಎಂದು ಅಧಿಕಾರಿಗಳಿಗೆ ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್‌ಪ್ರಸಾತ್‌ ಮನೋಹರ್‌ ಸೂಚಿಸಿದರು.

ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸೇವಾ ಕೇಂದ್ರಗಳ ವ್ಯಾಪ್ತಿಯಲ್ಲಿ ಒಳಚರಂಡಿಗೆ ಮಳೆನೀರನ್ನು ನೇರವಾಗಿ ಹರಿಸುತ್ತಿರುವ ಬಗ್ಗೆ ಸಮೀಕ್ಷೆ ಮಾಡಬೇಕು. ಇಂತಹ ಸಂಪರ್ಕವನ್ನು ತಡೆಗಟ್ಟಬೇಕು. ಕ್ರಮ ಕೈಗೊಳ್ಳಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT