ಪೀಣ್ಯದಾಸರಹಳ್ಳಿ: ‘ಜಗತ್ತಿನಾದ್ಯಂತ ನೈಸರ್ಗಿಕ ಕಲ್ಲು ಉದ್ಯಮವನ್ನು ಉತ್ತೇಜಿಸುವುದು ಮತ್ತು ಉದ್ಯಮವು ಎದುರಿಸುತ್ತಿರುವ ಸಮಸ್ಯೆ ಗಳನ್ನು ಪರಿಹರಿಸುವುದು ಒಕ್ಕೂಟದ ಉದ್ದೇಶ' ಎಂದು ಭಾರತೀಯ ಗ್ರಾನೈಟ್ ಮತ್ತು ಕಲ್ಲು ಉದ್ಯಮ ಒಕ್ಕೂಟದ (ಎಫ್ಐಜಿಎಸ್ಐ) ಅಧ್ಯಕ್ಷಈಶ್ವಿಂದರ್ ಸಿಂಗ್ ಹೇಳಿದರು.
ನಗರದ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಎಫ್ಐಜಿಎಸ್ಐ ವತಿಯಿಂದ ಆಯೋಜಿಸಲಾಗಿದ್ದ ‘ಸ್ಟೋನಾ-2020’ ಮೇಳದಲ್ಲಿ ಅವರು ಮಾತನಾಡಿದರು.
‘ಪ್ರಪಂಚದಾದ್ಯಂತ ಉತ್ಪತ್ತಿಯಾಗುವ ಕಲ್ಲುಗಳಲ್ಲಿ ಭಾರತದ ಪಾಲು ಶೇ.27ಕ್ಕಿಂತ ಹೆಚ್ಚು ಇದೆ. ಚಪ್ಪಡಿ, ಅಂಚು ಮತ್ತು ಸ್ಮಾರಕ ಕಲ್ಲುಗಳನ್ನು 90ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ’ ಎಂದರು.
‘ಕಲ್ಲಿನ ಉದ್ಯಮವು ಭಾರತೀಯ ಆರ್ಥಿಕತೆಯನ್ನು ಹೆಚ್ಚಿಸುವಲ್ಲಿ ಮತ್ತು ಕೃಷಿಯ ನಂತರ ಗ್ರಾಮೀಣ ವಲಯದಲ್ಲಿ ಉದ್ಯೋಗಾವಕಾಶವನ್ನು ಹೆಚ್ಚಿಸಲಿದೆ’ ಎಂದರು.
ಭಾನುವಾರ ನಡೆದ ಮೇಳದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಭಾಗವಹಿಸಿದ್ದರು. ದೇಶ–ವಿದೇಶಗಳ 550 ಪ್ರದರ್ಶಕರು ಭಾಗವಹಿಸಿದ್ದರು.