ಬೆಂಗಳೂರು: ‘ಚುನಾವಣೆಗಳಲ್ಲಿ ಇ.ವಿ.ಎಂ ಬದಲಿಗೆ ಹಿಂದಿನ ಮತಪತ್ರ ವಿಧಾನವನ್ನೇ ಅನುಸರಿಸಿದರೆ ತಂತ್ರಜ್ಞಾನವನ್ನು ವಿರೋಧಿಸಿದಂತೆ ಆಗಲಿದೆ. ಆದ್ದರಿಂದ, ಇವಿಎಂ ಹಾಗೂ ವಿ.ವಿ ಪ್ಯಾಟ್ ಬಳಕೆಯಲ್ಲಿ ಕೆಲವು ಬದಲಾವಣೆ ತರುವುದು ಅಗತ್ಯ’ ಎಂದು ವಕೀಲ ಪ್ರಶಾಂತ್ ಭೂಷಣ್ ಪ್ರತಿಪಾದಿಸಿದರು.
‘ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ ನಿಮಿತ್ತ ಭಾನುವಾರ ನಡೆದ ‘ಪ್ರಜಾಪ್ರಭುತ್ವ ಮತ್ತು ಮತದಾನ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಇವಿಎಂ ಹಾಗೂ ವಿ.ವಿ ಪ್ಯಾಟ್ ಅನ್ನು ನಿರಾಕರಿಸುವುದು ಬೇಡ. ಚುನಾವಣೆ ಪ್ರಕ್ರಿಯೆಗಳಲ್ಲಿ ಮೋಸ ನಡೆಯದಂತೆ ಭಾರತೀಯ ಚುನಾವಣಾ ಆಯೋಗ ಕ್ರಮ ವಹಿಸಬೇಕು. ಮತದಾನದ ಬಳಿಕ ಎರಡು ಚೀಟಿಗಳು ಬರಬೇಕು. ಒಂದು ಚೀಟಿಯು ಮತದಾರನಿಗೆ ಲಭಿಸುವಂತೆ ಆಗಬೇಕು’ ಎಂದು ಸಲಹೆ ನೀಡಿದರು.
ನಿವೃತ್ತ ಐಎಎಸ್ ಅಧಿಕಾರಿ ಎಂ.ಜಿ.ದೇವಸಹಾಯಂ, ಚುನಾವಣೆಗಳು ಜಾತಿ ಆಧಾರದ ಮೇಲೆ ನಡೆಯುತ್ತಿವೆ ಎಂದು ಬೇಸರ ಹೊರಹಾಕಿದರು.
ಪ್ರಾಧ್ಯಾಪಕ ಅರುಣ್ ಜೋಳದಕೂಡ್ಲಿಗಿ ಮಾತನಾಡಿ, ‘ಕರ್ನಾಟಕದಲ್ಲಿ ಎಸ್ಸಿ, ಎಸ್ಟಿ ಮೀಸಲು ಕ್ಷೇತ್ರಗಳಲ್ಲಿ ಹೆಚ್ಚು ನೋಟಾಗಳು ಬೀಳುತ್ತಿವೆ. ಇದು ಚರ್ಚಿಸಬೇಕಾದ ವಿಷಯ’ ಎಂದು ಹೇಳಿದರು.
ಗೋಷ್ಠಿಯಲ್ಲಿ ಅಜಯ್ ಗುಡವರ್ತಿ, ಬಿ. ಗೋಪಾಲ್, ಮಂಜುಳಾ ತೆಳ್ಗಡೆ ಪಾಲ್ಗೊಂಡಿದ್ದರು.