ಬೆಂಗಳೂರು: ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಮೀಸಲಿಡುವುದಕ್ಕೆ ಸಂಬಂಧಿಸಿ ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್ಕುಮಾರ್ ಪಾಂಡೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯವರ ಜೊತೆ ಆನ್ಲೈನ್ನಲ್ಲಿ ಸೋಮವಾರ ಸಭೆ ನಡೆಸಿದರು.
ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರು ಕೋವಿಡ್ ಪರೀಕ್ಷೆಗೆ ಒಳಗಾಗಿರದೇ ಇದ್ದರೂ, ಕೂಡಲೇ ದಾಖಲಿಸಿಕೊಳ್ಳಬೇಕು. ಇಂಥವರ ಚಿಕಿತ್ಸೆಗಾಗಿ ಹಾಸಿಗೆಗಳನ್ನು ಮೀಸಲಿಡಬೇಕು ಎಂದು ಸೂಚಿಸಿದರು. ನಿರ್ದಿಷ್ಟ ಶುಲ್ಕದ ಜೊತೆಗೆ ತೀವ್ರ ನಿಗಾ ಘಟಕದ ಹಾಸಿಗೆಗಳನ್ನು ನೀಡಬೇಕು. ಅಗತ್ಯವಿದ್ದರೆ ಹಾಸಿಗೆಗಳ ಸಂಖ್ಯೆ ಹೆಚ್ಚಿಸಬೇಕು ಎಂದೂ ಹೇಳಿದರು.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರನ್ನು ಮೊದಲು ಕೋವಿಡ್ ಆಸ್ಪತ್ರೆಗಳಲ್ಲಿ ದಾಖಲಿಸಿಕೊಳ್ಳಬೇಕು. ನಂತರ ಕೋವಿಡ್ ಪರೀಕ್ಷೆ ನಡೆಸಬೇಕು. ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ, ಕೋವಿಡ್ ಸೋಂಕಿತರ ವಾರ್ಡ್ಗೆ ಅವರನ್ನು ಸ್ಥಳಾಂತರಿಸಬೇಕು. ವರದಿ ನೆಗೆಟಿವ್ ಬಂದರೆ, ಬೇರೆ ವಾರ್ಡ್ಗೆ ಕಳುಹಿಸಬೇಕು ಎಂದು ಸೂಚಿಸಿದರು.
ಈ ಉದ್ದೇಶಕ್ಕಾಗಿ ಒಟ್ಟು 15 ಆಸ್ಪತ್ರೆಗಳನ್ನು (5 ಸರ್ಕಾರಿ ಮತ್ತು 10 ಖಾಸಗಿ) ಗುರುತಿಸಲಾಗಿದೆ. ಈ ಆಸ್ಪತ್ರೆಗಳು ಒಟ್ಟು 143 ಹಾಸಿಗೆಗಳನ್ನು ಈ ಉದ್ದೇಶಕ್ಕೆ ಮೀಸಲಿಡಬೇಕು. ಈ ಹಾಸಿಗೆಗಳು ಆಮ್ಲಜನಕ ಪೂರೈಕೆ ವ್ಯವಸ್ಥೆ, ವೆಂಟಿಲೇಟರ್ ವ್ಯವಸ್ಥೆ ಹೊಂದಿರಬೇಕು ಎಂದು ಹೇಳಿದರು.
15 ಆಸ್ಪತ್ರೆಗಳು:ರಾಜೀವ್ಗಾಂಧಿ ಎದೆರೋಗಗಳ ಆಸ್ಪತ್ರೆ, ಬೌರಿಂಗ್, ಕೆ.ಸಿ. ಜನರಲ್, ಸಿ.ವಿ. ರಾಮನ್, ಜಯನಗರ ಸರ್ಕಾರಿ ಆಸ್ಪತ್ರೆ, ಬ್ಯಾಪ್ಟಿಸ್ಟ್, ಚಿನ್ಮಯ ಮಿಷನ್, ಎಚ್ಬಿಎಸ್, ಪ್ರೊಮೆಡ್, ಸಕ್ರಾ, ಸಂತೋಷ, ಸಪ್ತಗಿರಿ, ಎಸ್ಎಸ್ಎನ್ಎಂಸಿ, ಸೇಂಟ್ ಫಿಲೊಮಿನಾ ಹಾಗೂ ವಿಕ್ರಂ ಆಸ್ಪತ್ರೆ.