ಬೆಂಗಳೂರು: ಕೋವಿಡ್ ಪರೀಕ್ಷೆಗೆ ಗಂಟಲ ಹಾಗೂ ಮೂಗಿನ ದ್ರವದ ಮಾದರಿ ನೀಡದಿದ್ದರೂ ಪರೀಕ್ಷೆ ಪ್ರಕ್ರಿಯೆ ನಡೆಯುತ್ತಿರುವ ಬಗ್ಗೆ ಕೆಲವರ ಮೊಬೈಲ್ ಸಂಖ್ಯೆಗೆ ಸಂದೇಶಗಳು ಬರಲಾರಂಭಿಸಿವೆ.
ಥಣಿಸಂದ್ರದ ನಿವಾಸಿ ಇಗ್ಲೇಷಿಯಸ್ ರೋಡ್ರಿಗಸ್ ಎಂಬುವವರು ಕೋವಿಡ್ ಪರೀಕ್ಷೆಗೆ ಮಾದರಿ ನೀಡದಿದ್ದರೂ ಸಂದೇಶ ಸ್ವೀಕರಿಸಿದ್ದಾರೆ. ಈ ರೀತಿ ಪ್ರಕರಣಗಳು ಎರಡನೇ ಅಲೆಯಲ್ಲಿಯೂ ವರದಿಯಾಗಿದ್ದವು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
‘ಕೋವಿಡ್ ಆರ್ಟಿ–ಪಿಸಿಆರ್ ಪರೀಕ್ಷೆಗೆ ಮಾದರಿಗಳನ್ನು ಯಾವಾಗಲೂ ನೀಡಿಲ್ಲ. ಆದರೂ ಸಂಗ್ರಹಿಸಿದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂಬ ಸಂದೇಶ ಸ್ವೀಕರಿಸಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದ್ದು, ತನಿಖೆ ಮಾಡುವುದಾಗಿ ತಿಳಿಸಿದ್ದಾರೆ’ ಎಂದುರೋಡ್ರಿಗಸ್ ವಿವರಿಸಿದರು.
‘ಕೋವಿಡ್ ಪರೀಕ್ಷೆಗೆ ಸಂಬಂಧಿಸಿದಂತೆ ನಗರದಾದ್ಯಂತ ಮೇಲ್ವಿಚಾರಣೆ ನಡೆಸಲು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ನಿಗದಿತ ಪರೀಕ್ಷಾ ಕೇಂದ್ರಗಳಿಗೆ ತೆರಳುವ ತಂಡಗಳು, ನಕಲಿ ಸಂದೇಶಗಳ ಬಗ್ಗೆ ಪರಿಶೀಲನೆ ನಡೆಸಲಿವೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ. ತ್ರಿಲೋಕ್ ಚಂದ್ರ ತಿಳಿಸಿದರು.