ದರೋಡೆ; ಅಣ್ಣ–ತಮ್ಮ ಬಂಧನ
ಬೆಂಗಳೂರು: ಮನೆಯೊಂದಕ್ಕೆ ನುಗ್ಗಿ ಮಹಿಳೆಯ ಕೈ–ಕಾಲು ಕಟ್ಟಿಹಾಕಿ ದರೋಡೆ ಮಾಡಿದ್ದ ಆರೋಪದಡಿ ಅಣ್ಣ–ತಮ್ಮನನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ತಿಂಡ್ಲು ಮುಖ್ಯರಸ್ತೆಯ ಬಸವಸಮಿತಿ ಲೇಔಟ್ ನಿವಾಸಿ ಅರವಿಂದ್ (30) ಹಾಗೂ ಬಸವನಗುಡಿ ಬಿ.ಪಿ. ವಾಡಿಯಾ ರಸ್ತೆಯ ನಿವಾಸಿ ಅವಿನಾಶ್ (34) ಬಂಧಿತರು. ಅವರಿಂದ 123.77 ಗ್ರಾಂ ತೂಕದ ಚಿನ್ನಾಭರಣ, 3 ಕೆ.ಜಿ ಬೆಳ್ಳಿ ಸಾಮಗ್ರಿ ಹಾಗೂ ₹40 ಸಾವಿರ ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಸುಭಾಷ್ ಎಂಬುವರು ಪತ್ನಿ ಜಯಶ್ರೀ ಜೊತೆ ಬಸವ ಸಮಿತಿ ಲೇಔಟ್ನ ಮನೆಯಲ್ಲಿ ವಾಸವಿದ್ದರು. ಅವರಿಗೆ ಸೇರಿದ್ದ ಮನೆಯಲ್ಲೇ ಬಾಡಿಗೆಗೆ ಇದ್ದ ಆರೋಪಿ ಅರವಿಂದ್ ಕೃತ್ಯ ಎಸಗಿದ್ದ’ ಎಂದೂ ತಿಳಿಸಿದರು.
ಬಟ್ಟೆ ವ್ಯಾಪಾರದಲ್ಲಿ ನಷ್ಟ: ‘ಆರೋಪಿ, ಸಾಲ ಮಾಡಿ ಬಟ್ಟೆ ವ್ಯಾಪಾರ ಆರಂಭಿಸಿದ್ದ. ಅದರಲ್ಲಿ ನಷ್ಟ ಅನುಭವಿಸಿದ್ದ ಕಾರಣಕ್ಕೆ ಕೃತ್ಯಕ್ಕೆ ಸಂಚು ರೂಪಿಸಿದ್ದ’ ಎಂದಿದ್ದಾರೆ.
ಕೃತ್ಯ ನಡೆದ ದಿನ ಪೊಲೀಸರ ತಂಡ ಮನೆಗೆ ಹೋದಾಗಲೂ ಆರೋಪಿ ಸ್ಥಳದಲ್ಲಿದ್ದ. ತನಗೇನು ಗೊತ್ತಿಲ್ಲದಂತೆ ನಟಿಸಿದ್ದ. ಆರೋಪಿಗಳು ಜಯಶ್ರೀ ಅವರನ್ನು ಹಿಂದಿನಿಂದ ಹಿಡಿದುಕೊಂಡು ಕಟ್ಟಿಹಾಕಿದ್ದರು. ಅವರೂ ಆರೋಪಿಗಳನ್ನು ನೋಡಿರಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.