ಬೆಂಗಳೂರು: ಚೆಂಡು ವಿರೂಪಗೊಳಿಸಲು ತಂಡದ ಆಟಗಾರರಿಗೆ ಕುಮ್ಮಕ್ಕು ನೀಡಿದ್ದು ಶಿಕ್ಷಾರ್ಹ ಅಪರಾಧವೇ. ಆದರೆ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಮೇಲೆ ಆಜೀವ ನಿಷೇಧ ಹೇರಬೇಕೆಂದು ಆಗ್ರಹಿಸುವುದು ಸರಿಯಲ್ಲ ಎಂದು ದಕ್ಷಿಣ ಆಫ್ರಿಕಾದ ಹಿರಿಯ ಕ್ರಿಕೆಟಿಗ ಜಾಂಟಿ ರೋಡ್ಸ್ ಅಭಿಪ್ರಾಯಪಟ್ಟರು.
ನಗರದಲ್ಲಿ ಮಂಗಳವಾರ ನಡೆದ ಸ್ಪೋರ್ಟ್ಸ್ ಫ್ಯಾಂಟಸಿ ಲೀಗ್ ‘ಸ್ಟಾರ್ ಪಿಕ್’ನಲ್ಲಿ ಪಾಲ್ಗೊಂಡ ಅವರು ’ಪ್ರಜಾವಾಣಿ’ ಜೊತೆ ಮಾತನಾಡಿದರು.
2000ನೇ ಇಸವಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ ಪ್ರವಾಸಿ ತಂಡದ ನಾಯಕ ಹ್ಯಾನ್ಸಿ ಕ್ರೋನಿಯೆ ಅವರ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿತ್ತು. ಅಂದು ಜಾಂಟಿ ರೋಡ್ಸ್ ಕೂಡ ತಂಡದಲ್ಲಿದ್ದರು.
ಇದನ್ನು ನೆನಪಿಸಿಕೊಂಡ ಅವರು ‘ಅಂದು ಕ್ರೋನಿಯೆ ಅವರಿಗೆ ಆಜೀವ ನಿಷೇಧ ಹೇರಲಾಗಿತ್ತು. ಆಗ ಅವರು ಅನುಭವಿಸಿದ ನೋವು ನಾನು ಬಲ್ಲೆ. ಹೀಗಾಗಿ ಆಜೀವ ನಿಷೇಧ ಎಷ್ಟು ಗಂಭೀರವಾದದ್ದು ಎಂದು ನನಗೆ ಗೊತ್ತು. ಸ್ಮಿತ್ ಮತ್ತು ವಾರ್ನರ್ ಮಾಡಿದ್ದು ಕೂಡ ತಪ್ಪು. ಅವರನ್ನು ಶಿಕ್ಷಿಸಲು ಬೇರೆ ಮಾರ್ಗಗಳಿವೆ’ ಎಂದು ಅವರು ಹೇಳಿದರು.
’ಸ್ಮಿತ್ ಮತ್ತು ವಾರ್ನರ್ ಅವರನ್ನು ಈಗಾಗಲೇ ಅಲ್ಲಿನ ಸರ್ಕಾರ, ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಆಸ್ಟ್ರೇಲಿಯಾ ಸ್ಪೋರ್ಟ್ಸ್ ಕೌನ್ಸಿಲ್ ದಂಡಿಸಿದೆ. ಇಷ್ಟೆಲ್ಲ ಆದ ನಂತರ ಆಜೀವ ನಿಷೇಧ ಹೇರುವುದು ಸರಿಯಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.
ಬೂಮ್ರಾ ಅಚ್ಚರಿ
ಇತ್ತೀಚೆಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡ ಭಾರತ ತಂಡದ ಬಗ್ಗೆ ಮಾತನಾಡಿದ ರೋಡ್ಸ್ ಆ ಪ್ರವಾಸದಲ್ಲಿ ಕಂಡ ದೊಡ್ಡ ಅಚ್ಚರಿ ಎಂದರೆ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ. ಕೇವಲ ಮೂರು ಪಂದ್ಯಗಳಲ್ಲಿ ಅವರು ತೋರಿದ ಸಾಧನೆ ಪ್ರಶಂಸನೀಯ ಎಂದರು.