ಬೆಂಗಳೂರು: ಮಳೆ ಹಾಗೂ ನೆರೆಯಿಂದಾಗಿ ಈವರೆಗೆ ಸುಮಾರು ₹32 ಸಾವಿರ ಕೋಟಿಗಳಿಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ರಾಜ್ಯ ಸರ್ಕಾರ ಅಂದಾಜು ಮಾಡಿದೆ.
ಪ್ರವಾಹ ಪೀಡಿತ ಪ್ರದೇಶಗಳ ಅಧ್ಯಯನಕ್ಕೆ ಬಂದಿದ್ದ ಕೇಂದ್ರದ ಪ್ರಕಾಶ್ ನೇತೃತ್ವದ ತಂಡಕ್ಕೆ ಈ ಮಾಹಿತಿ ನೀಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ನಷ್ಟದ ವಿವರ ನೀಡಲಾಗಿದೆ.
‘ಕೇಂದ್ರ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಲು ಸಹಕಾರಿಯಾಗುವಂತೆ ವಾಸ್ತವಿಕ ನೆಲೆಗಟ್ಟಿನಲ್ಲಿ ಅಧ್ಯಯನ ತಂಡ ವರದಿ ಸಲ್ಲಿಸಲಿದೆ’ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ವರದಿ ಸಿದ್ಧ:‘ನೆರೆ ಹಾನಿ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಶೇ 90ರಷ್ಟುವರದಿ ಸಿದ್ಧವಾಗಿದೆ’ ಎಂದುರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಇನ್ನೂ ಕೆಲ ದಿನಗಳು ನೆರೆ ಹಾನಿ ಪರಿಶೀಲನೆ ಮುಂದುವರಿಯಲಿದ್ದು, ನಷ್ಟದ ಮೊತ್ತ ಇನ್ನಷ್ಟು ಹೆಚ್ಚಳವಾಗಲಿದೆ. ಕೇಂದ್ರ ತಂಡದ ಸದಸ್ಯರು ಉತ್ತರ ಕರ್ನಾಟಕ, ಕರಾವಳಿ ಭಾಗಗಳಲ್ಲಿ ಪರಿಶೀಲನೆ ನಡೆಸಿದ್ದಾರೆ ಎಂದರು.
ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ನೀಡಿರುವ ₹1 ಸಾವಿರ ಕೋಟಿ ಹಣವನ್ನು ನೆರೆ ಪರಿಹಾರಕ್ಕೆ ಬಳಸಿಕೊಳ್ಳಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
‘ಬಿಡದಿ ಮಾದರಿ ಅನುಸರಿಸಿ’
ದೇಶದಲ್ಲಿ ಎದುರಾಗಿರುವ ಆರ್ಥಿಕ ಹಿಂಜರಿತದಿಂದ ಪೀಣ್ಯ ಕೈಗಾರಿಕಾಪ್ರದೇಶದಲ್ಲಿನ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಪ್ರತಿಕ್ರಿಯಿಸಿ, ಪೀಣ್ಯ ಕೈಗಾರಿಕಾಪ್ರದೇಶದಲ್ಲಿರುವ ಉದ್ಯಮಿಗಳು ಒಟ್ಟಾಗಿ ಸೇರಿಕೊಂಡು ಸಂಘ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಈಗಾಗಲೇ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಸಂಘವನ್ನು ನಿರ್ಮಿಸಿಡಿದ್ದು, ಸಂಘದ ಮೂಲಕ ಅಗತ್ಯ ಹಣ ಸಂಗ್ರಹಿಸಿ, ಅಭಿವೃದ್ಧಿ ಕಡೆ ಸಾಗುತ್ತಿದೆ. ಇದೇ ಮಾದರಿಯನ್ನು ಪೀಣ್ಯ ಕೈಗಾರಿಕಾ ಪ್ರದೇಶ ಅನುಸರಿಸ ಬೇಕು. ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು ಎಂದರು.