ರಾಜರಾಜೇಶ್ವರಿನಗರ: ‘ಕ್ಷೇತ್ರ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸದೆಯೇ ₹152 ಕೋಟಿ ಹಗರಣ ಮಾಡಿರುವ ಬಗ್ಗೆ ಲೋಕಾಯುಕ್ತ ವರದಿ ಬಯಲು ಮಾಡಿದ್ದರೂ ಸಚಿವ ಮುನಿರತ್ನ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಇದರ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಿದ ಮುಖಂಡರಿಗೆ ಅಭಿನಂದನೆ ಸಲ್ಲಿಸಲು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಶನಿವಾರ ಮಾತನಾಡಿದರು.
‘ಕ್ಷೇತ್ರದಲ್ಲಿ 60 ಸಾವಿರ ನಕಲಿ ಮತದಾರರನ್ನು ಪಟ್ಟಿಗೆ ಸೇರಿಸಲಾಗಿದ್ದು, ಇದರ ವಿರುದ್ಧ ಸೋಮವಾರ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಲಾಗುವುದು. ಬೇನಾಮಿ ಹೆಸರಿನಲ್ಲಿ ಶಾಸಕರೇ ನೂರಾರು ಕೋಟಿ ಮೊತ್ತದ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ. ಕಳಪೆ ಕಾಮಗಾರಿ ಬಗ್ಗೆ ಪ್ರಶ್ನಿಸಿದರೆ ಸುಳ್ಳು ಮೊಕದ್ದಮೆ ದಾಖಲಿಸುತ್ತಿದ್ದಾರೆ’ ಎಂದರು.
‘ಭ್ರಷ್ಟಾಚಾರ, ಕಾಮಗಾರಿಯಲ್ಲಿ ಪರ್ಸೆಂಟೇಜ್, ಪಿಎಸ್ಐ ನೇಮಕಾತಿ ಹಗರಣ, ವರ್ಗಾವಣೆ ದಂಧೆ, ಬೆಲೆ ಏರಿಕೆಯಿಂದ ಸೃಷ್ಟಿಯಾಗಿರುವ ಹಗರಣ ಮರೆಮಾಚಲು ಧರ್ಮದ ಹೆಸರಿನಲ್ಲಿ ಅಶಾಂತಿಯ ವಾತಾವರಣವನ್ನು ಸರ್ಕಾರ ಸೃಷ್ಟಿಸುತ್ತಿದೆ. ಇದರ ವಿರುದ್ಧ ಜನ ಜಾಗೃತರಾಗಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು’ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಎಚ್.ಕುಸುಮಾ, ‘ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಪಕ್ಷ ಎಂದರೆ ಅದು ಕಾಂಗ್ರೆಸ್. ದೇಶದ ಅಭಿವೃದ್ಧಿ ಹಾಗೂ ಏರಿಕೆಯಾಗಿರುವ ದರಗಳನ್ನು ಕಡಿಮೆಗೊಳಿಸುವ ಸಾಮರ್ಥ್ಯ ಇರುವುದು ಕಾಂಗ್ರೆಸ್ಗೆ ಮಾತ್ರ’ ಎಂದರು.
ಕಾಂಗ್ರೆಸ್ನ ಬೆಂಗಳೂರು ಉತ್ತರ ಜಿಲ್ಲಾ ಘಟಕದ ಅಧ್ಯಕ್ಷ ಎಂ.ರಾಜ್ಕುಮಾರ್, ಮುಖಂಡರಾದ ಹನುಮಂತರಾಯಪ್ಪ, ರಾಂಪುರ ನಾಗೇಶ್, ಎ.ಅಮರನಾಥ್, ಗೋಪಾಲ್, ಕೆಪಿಸಿಸಿ ಪ್ರಚಾರ ಸಮಿತಿ ಸಂಚಾಲಕ ಎಂ.ತಿಬ್ಬೇಗೌಡ, ತುಕಾರಾಂ ಮಾತನಾಡಿದರು.