ಬೆಂಗಳೂರು:‘ಡಾ.ವೇಮಗಲ್ ನಾರಾಯಣಸ್ವಾಮಿ ಸಂಸ್ಕೃತಿ ಪ್ರಶಸ್ತಿ’ ಪಡೆದ ಸಂಗೀತ ನಿರ್ದೇಶಕ ಡಾ.ಹಂಸಲೇಖ ಅವರು ನಗದು ಪುರಸ್ಕಾರವನ್ನು ಪ್ರವಾಹ ಸಂತ್ರಸ್ತರ ಪುನರ್ವಸತಿ ಕಾರ್ಯಕ್ಕೆ ದೇಣಿಗೆ ನೀಡಿದರು.
‘ಡಾ.ವೇಮಗಲ್ ನಾರಾಯಣ ಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನ’ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಪ್ರತಿಷ್ಠಾನ ಉದ್ಘಾಟನೆ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಅವರು, ‘ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ನಲುಗಿರುವ ಜನ ಅತಂತ್ರ ಸ್ಥಿತಿಯಲ್ಲಿದ್ದಾರೆ. ನನಗೆ ದೊರೆತ ಪ್ರಶಸ್ತಿಯ ಮೊತ್ತವನ್ನು (₹25 ಸಾವಿರ) ಮುಖ್ಯಮಂತ್ರಿ ಅವರ ಪರಿಹಾರ ನಿಧಿಗೆ ನೀಡುತ್ತೇನೆ’ ಎಂದು ತಿಳಿಸಿದರು.
‘ಪ್ರವಾಹ ಸಂತ್ರಸ್ತರಿಗೆ ಸಹಾಯದ ಅವಶ್ಯಕತೆ ಇದೆ. ಈಗಾಗಲೇ ಹಲವು ಸಂಸ್ಥೆಗಳು ಸಂತ್ರಸ್ತರಿಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಸಂಗ್ರಹ ಮಾಡುತ್ತಿವೆ. ಇಂಥ ಸಂದರ್ಭದಲ್ಲಿ ಅವರ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕಿದೆ. ಈ ಸಮಯದಲ್ಲಿ ಒಬ್ಬರು ಇನ್ನೊಬ್ಬರಿಗೆ ಮಾದರಿಯಾಗಬೇಕಿದೆ’ ಎಂದರು.
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ‘ಕೋಮುಗಲಭೆಗಳು ಹೆಚ್ಚಾಗಿರುವುದಕ್ಕೆ ಕಾರಣ, ಜಾನಪದ ಕಲೆಗಳು ನಶಿಸುತ್ತಿರುವುದು. ಈಚೆಗೆ ಗ್ರಾಮೀಣ ಪ್ರದೇಶದ ಮಹಿಳೆಯರಲ್ಲೂ ಜಾನಪದ ಜ್ಞಾನ ಕುಂಠಿತಗೊಳ್ಳುತ್ತಿದೆ. ಈ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವಂತೆ ಅರಿವು ಮೂಡಿಸಬೇಕು’ ಎಂದರು.
‘ಜಾನಪದ ಕಲೆ ಉಳಿಸಿ ಬೆಳೆಸಿ’: ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ‘ಇಂದಿನ ಸಮಾಜ ಆಧುನಿಕತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ಆದ್ದರಿಂದ ಜಾನಪದ ಕಲೆ ವಿನಾಶದ ಅಂಚಿಗೆ ತಲುಪಿದೆ. ಯುವಜನತೆಗೆ ಮತ್ತು ನಗರ ಪ್ರದೇಶಗಳಲ್ಲಿ ಈ ಕಲೆಗಳನ್ನು ಪರಿಚಯಿಸುವ ಹಾಗೂ ಅವುಗಳನ್ನು ಉಳಿಸಿ ಬೆಳೆಸುವ ಅವಶ್ಯಕತೆ ಇದೆ’ ಎಂದರು.
‘ಜಾನಪದ ಕಲೆ ಉಳಿಸಿ ಬೆಳೆಸಿ’ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ‘ಇಂದಿನ ಸಮಾಜ ಆಧುನಿಕತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದೆ. ಆದ್ದರಿಂದ ಜಾನಪದ ಕಲೆ ವಿನಾಶದ ಅಂಚಿಗೆ ತಲುಪಿದೆ. ಯುವಜನತೆಗೆ ಮತ್ತು ನಗರ ಪ್ರದೇಶಗಳಲ್ಲಿ ಈ ಕಲೆಗಳನ್ನು ಪರಿಚಯಿಸುವ ಹಾಗೂ ಅವುಗಳನ್ನು ಉಳಿಸಿ ಬೆಳೆಸುವ ಅವಶ್ಯಕತೆ ಇದೆ’ ಎಂದರು.