ಬೆಂಗಳೂರು: ನಗರದಲ್ಲಿ ಶನಿವಾರ ರಾತ್ರಿ ದಿಢೀರ್ ಸುರಿದ ಧಾರಾಕಾರ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಮಸ್ಯೆ ಉಂಟಾಯಿತು. ರಾತ್ರಿ 9 ಗಂಟೆ ವೇಳೆಗೆ ಗುಡುಗು ಸಹಿತ ಆರಂಭವಾದ ಮಳೆಯು 11 ಗಂಟೆಯವರೆಗೂ ಸುರಿಯಿತು.
ನಗರದ ಶ್ರೀರಾಂಪುರ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಗೊರಗುಂಟೆಪಾಳ್ಯ, ಪೀಣ್ಯ, ಯಲಹಂಕ, ಮಾಗಡಿ ರಸ್ತೆ, ಜಯನಗರ, ಬನಶಂಕರಿ, ಮೆಜೆಸ್ಟಿಕ್, ಶಿವಾಜಿನಗರ, ಕೆಂಗೇರಿ, ಜೆ.ಸಿ.ನಗರ, ಹೆಬ್ಬಾಳ ಸೇರಿ ವಿವಿಧ ಬಡಾವಣೆಯಲ್ಲಿ ಧಾರಾಕಾರ ಮಳೆಯಾಗಿದೆ.
ತಗ್ಗು ಪ್ರದೇಶಗಳಲ್ಲಿರುವ ವಿವಿಧ ಕೆಳ ಸೇತುವೆಗಳಲ್ಲಿ ನೀರು ನಿಂತಿದ್ದು, ವಾಹನ ಸವಾರರು ಪರದಾಡಿದರು. ಸಂಚಾರ ವ್ಯವಸ್ಥೆಯು ಅಸ್ತವ್ಯಸ್ತಗೊಂಡಿತು. ವಾರಾಂತ್ಯದಲ್ಲಿ ಖರೀದಿಗೆ ಬಂದಿದ್ದವರು ಮಳೆಯಲ್ಲಿ ಸಿಲುಕಿಕೊಂಡು ಪರದಾಡಿದರು.
ಮೈಸೂರು ರಸ್ತೆಯ ಆಂಜನೇಯ ದೇವಸ್ಥಾನ ಬಳಿ ನೀರು ನಿಂತು ಸಮಸ್ಯೆಯಾಯಿತು.
ವಿಠಲ್ ಮಲ್ಯ ಆಸ್ಪತ್ರೆಯ ಎದುರು ಎರಡು ಅಡಿಯಷ್ಟು ನೀರು ಬಂದಿತ್ತು. ಕೆ.ಆರ್.ಮಾರುಕಟ್ಟೆಯ ಬಳಿಕ ಮೇಲ್ಸೇತುವೆಯಲ್ಲಿಯೂ ವಾಹನವೊಂದು ಕೆಟ್ಟು ನಿಂತಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಯಿತು.
ಹೊರವಲಯದ ಕನಕಲೇಔಟ್ನಲ್ಲಿಹಲವು ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡಿದರು. ಹಲವು ಪ್ರದೇಶಗಳಲ್ಲಿ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗಿರುವ ವರದಿ ಇದೆ. ಜಂಕ್ಷನ್ಗಳು ಹಾಗೂ ಕೂಡುರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ರಾಜಧಾನಿಯಲ್ಲಿ ಇನ್ನೂ ಎರಡು ದಿನ ಕಾಲ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.