ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ರಾತ್ರಿ 10ರ ಬಳಿಕ ಹೋಟೆಲ್‌ ವಹಿವಾಟಿಗೆ ಇಲ್ಲ ಅವಕಾಶ

ಕೋವಿಡ್‌ ನಿಯಂತ್ರಣ ನಿಯಮ ಕಡ್ಡಾಯವಾಗಿ ಪಾಲಿಸಿ: ಹೋಟೆಲ್‌ ಮಾಲೀಕರಿಗೆ ಬಿಬಿಎಂಪಿ ಸೂಚನೆ
Last Updated 3 ಆಗಸ್ಟ್ 2021, 22:35 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹೋಟೆಲ್‌ಗಳು ರಾತ್ರಿ 10 ಗಂಟೆ ಬಳಿಕ ವಹಿವಾಟು ನಡೆಸಬಾರದು ಎಂದು ಬಿಬಿಎಂಪಿ ಸೂಚನೆ ನೀಡಿದೆ.

ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳ ಜೊತೆ ವರ್ಚುವಲ್ ರೂಪದಲ್ಲಿ ಮಂಗಳವಾರ ಸಭೆ ನಡೆಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ, ‘ನಗರದಲ್ಲಿ ಕೋವಿಡ್ ಸೋಂಕು ನಿಯಂತ್ರಣದಲ್ಲಿರಬೇಕಾದರೆ ಎಲ್ಲ ಹೋಟೆಲ್‌ಗಳಲ್ಲೂ ಕೋವಿಡ್ ನಿಯಂತ್ರಣ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಸೂಚನೆ ನೀಡಿದರು.

‘ನಗರದಲ್ಲಿ ರಾತ್ರಿ 10 ರಿಂದ ಮುಂಜಾನೆ 5 ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ. ಆದರೂ ಬಹುತೇಕ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ರಾತ್ರಿ 10 ಬಳಿಕವೂ ವಹಿವಾಟು ನಡೆಸುತ್ತಿವೆ. ಇದರಿಂದಾಗಿ ನಾಗರಿಕರು ಹೊರಗಡೆ ಅಡ್ಡಾಡುತ್ತಿದ್ದಾರೆ. ಇನ್ನು ರಾತ್ರಿ 10ರ ಒಳಗೆ ಹೋಟೆಲ್‌ಗಳನ್ನು ಮುಚ್ಚಬೇಕು’ ಎಂದು ಕಟ್ಟುನಿಟ್ಟಾಗಿ ತಿಳಿಸಿದರು.

‘ಅಡುಗೆ ಸಿಬ್ಬಂದಿ, ಊಟ ಬಡಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಗ್ರಾಹಕರು ಊಟ/ ತಿಂಡಿ ತಿನಿಸು ಸೇವಿಸುವ ಸಂದರ್ಭದ ಹೊರತಾಗಿ ಇತರ ವೇಳೆ ಮಾಸ್ಕ್ ಧರಿಸುವಂತೆ ನೋಡಿಕೊಳ್ಳಬೇಕು. ಗ್ರಾಹಕರು ಅಂತರ ಕಾಯ್ದುಕೊಳ್ಳುವುದಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ನಿಯಮ ಪಾಲನೆ ಕುರಿತು ಅವರಲ್ಲಿ ಅರಿವು ಮೂಡಿಸಬೇಕು’ ಎಂದರು.

‘ಹೋಟೆಲ್‌ನ ಸಿಬ್ಬಂದಿಯನ್ನೂ ಆಗಿಂದಾಗ್ಗೆ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಸೋಂಕು ಪತ್ತೆಯಾದಲ್ಲಿ, ಅಂತಹ ಸಿಬ್ಬಂದಿಯ ಪ್ರತ್ಯೇಕ ವಾಸಕ್ಕೆ ವ್ಯವಸ್ಥೆ ಸಜ್ಜಾಗಿರಬೇಕು’ ಎಂದು ತಿಳಿಸಿದರು.

‘ರೆಸ್ಟೋರಂಟ್‌ಗಳಲ್ಲಿ, ಪಾರ್ಟಿ ಹಾಲ್‌ಗಳಲ್ಲಿ ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಯಾವುದಾದರೂ ಸಮಾರಂಭ ನಡೆಯುವಾಗ ನಿಯಮಗಳ ಉಲ್ಲಂಘನೆ ಆಗದಂತೆ ಸಂಬಂಧಪಟ್ಟ ಸಿಬ್ಬಂದಿ ಎಚ್ಚರ ವಹಿಸಬೇಕು’ ಎಂದರು.

-0-

ಹೋಟೆಲ್‌ ಕಾರ್ಮಿಕಗೆ ಕೋವಿಡ್‌

ಜ್ಞಾನಭಾರತಿ ವಾರ್ಡ್‌ನ ಎನ್.ಜಿ.ಎಫ್ ಬಡಾವಣೆಯ ಹೋಟೆಲ್‌ನ ಕಾರ್ಮಿಕರೊಬ್ಬರಲ್ಲಿ ಕೋವಿಡ್ ದೃಢಪಟ್ಟಿದೆ. ಹಾಗಾಗಿ ಹೋಟೆಲ್‌ನ ಎಲ್ಲ ಕಾರ್ಮಿಕರನ್ನೂ ಬಿಬಿಎಂಪಿ ಕೋವಿಡ್‌ ಪರೀಕ್ಷೆಗೆ ಒಳಪಡಿಸಿದೆ. ಹೋಟೆಲ್‌ ಕಟ್ಟಡಕ್ಕೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಾಗಿದ್ದು, ಹೋಟೆಲನ್ನು ಮುಚ್ಚಲಾಗಿದೆ.

‘ನಾಗರಭಾವಿ ಮುಖ್ಯರಸ್ತೆ ಬಳಿಯಲ್ಲಿರುವ ನಮ್ಮೂರ ತಿಂಡಿ ಹೋಟೆಲ್‌ ಕಾರ್ಮಿಕರನ್ನು ಕೋವಿಡ್- ಪರೀಕ್ಷೆಗೆ ಒಳಪಡಿಸಿದ್ದೆವು. ಈ ವೇಳೆ ಒಬ್ಬ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ಪರೀಕ್ಷೆಗೆ ಒಳಪಟ್ಟ ಇತರ ಕಾರ್ಮಿಕರನ್ನು ಫಲಿತಾಂಶ ಬರುವವರೆಗೆ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ರಾಜರಾಜೇಶ್ವರಿನಗರ ವಲಯದ ಎಲ್ಲ ಹೋಟೆಲ್‌ಗಳ ಕಾರ್ಮಿಕರೆಲ್ಲರನ್ನೂ ಕೋವಿಡ್‌ ಪರೀಕ್ಷೆಗೆ ಒಳಪಡಿಸುವಂತೆ ಮತ್ತು ಅವರೆಲ್ಲರಿಗೂ ಕೋವಿಡ್ ಲಸಿಕೆ ಹಾಕಿಸುವಂತೆ ವಲಯ ಆಯುಕ್ತ ರೆಡ್ಡಿ ಶಂಕರಬಾಬು ಅವರು ಹೋಟೆಲ್‌ಗಳ ಮಾಲೀಕರಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT