ಬೆಳಗಾವಿ: ‘ಬಿಜೆಪಿಯವರೇ ನಿಮಗೆ ಇನ್ನೆಷ್ಟು ಬಲಿ ಬೇಕು? ಹೊಲಸು ರಾಜಕಾರಣ ಬಿಡಿ. ಸಂತೋಷ್ ಪಾಟೀಲ ಅವರನ್ನು ಸಾಯಿಸಿದ್ದೀರಿ. ಕೊನೆಯ ಪಕ್ಷ ಅವರ ಪತ್ನಿ, ತಾಯಿಯ ಕಣ್ಣೀರನ್ನಾದರೂ ಒರೆಸುವ ಕೆಲಸ ಮಾಡಿ‘ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಬಡಸ ಕೆ.ಎಚ್. ಗ್ರಾಮದಲ್ಲಿ ಸಂತೋಷ್ ಅಂತ್ಯಕ್ರಿಯೆಯಲ್ಲಿ ಗುರುವಾರ ಪಾಲ್ಗೊಂಡ ಬಳಿಕ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ‘ಬಿಜೆಪಿಯವರಿಗೆ ಮಾನವೀಯತೆ ಮುಖ್ಯವಲ್ಲ; ರಾಜಕಾರಣವೇ ಮುಖ್ಯವಾಗಿದೆ. ಈ ಹೊಲಸು ರಾಜಕಾರಣದಿಂದ ಇನ್ನೂ ಅದೆಷ್ಟು ಮಂದಿಯ ಬಲಿ ಪಡೆಯುತ್ತಾರೆಯೋ ಗೊತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದರು.
‘ಸಂತೋಷ ಬಿಜೆಪಿ ಕಾರ್ಯಕರ್ತ. ಅವನು ಸತ್ತಾಗ ಕೊರಳಲ್ಲಿ ಕೇಸರಿ ಶಾಲು ಹಾಕಿದ್ದ. ಪ್ರಧಾನಿ ನರೇಂದ್ರ ಮೋದಿ, ಶಾಸಕ ಬಿ.ಎಸ್. ಯಡಿಯೂರಪ್ಪ ಅವರ ಅಪ್ಪಟ ಅಭಿಮಾನಿಯಾಗಿದ್ದ. ಆದರೆ, ಬಿಜೆಪಿಯ ಯಾವೊಬ್ಬ ಮುಖಂಡರೂ ಅಂತ್ಯಕ್ರಿಯೆಗೆ ಬಾರದಿದ್ದುದು ದುರದೃಷ್ಟಕರ’ ಎಂದು ಕಿಡಿಕಾರಿದರು.
‘ನಾನು ಒಂದು ಕರೆ ಕೊಟ್ಟಿದ್ದರೆ ಸಾವಿರಾರು ಜನ ಸೇರುತ್ತಿದ್ದರು. ಎರಡು ದಿನಗಳಿಂದ ಸಂತೋಷ್ ತಾಯಿ, ಪತ್ನಿ ಮತ್ತು ಕುಟುಂಬದವರು ಊಟ, ನಿದ್ರೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಅಂತ್ಯಕ್ರಿಯೆ ನಡೆಯಲು ಬಿಟ್ಟಿದ್ದೇವೆ’ ಎಂದರು.
‘ಶ್ರೀರಾಮನ ಭಜನೆ ಮಾಡುವವರ ಮನಸ್ಸು ಇಷ್ಟೊಂದು ಕಠೋರವಾಯಿತೇ? ಸಂತೋಷ್ ಮೊಬೈಲ್ ಫೋನ್ನಲ್ಲಿ ಎಲ್ಲ ಸಾಕ್ಷಿಯೂ ಸಿಕ್ಕಿದೆ. ಆದರೂ ಆರೋಪಿಗಳನ್ನು ಈವರೆಗೂ ಬಂಧಿಸಿಲ್ಲವೇಕೆ? ಸಾಕ್ಷಿ ತಿರುಚಲು ಪ್ರಯತ್ನಿಸುತ್ತಿದ್ದೀರಾ? ಈಶ್ವರಪ್ಪ ಅವರನ್ನು ಮಂತ್ರಿ ಸ್ಥಾನದಿಂದ ವಜಾಗೊಳಿಸುವ ಜೊತೆಗೆ, ಬಂಧಿಸಬೇಕು’ ಎಂದು ಒತ್ತಾಯಿಸಿದರು.
ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮುಖಂಡ ಅಡಿವೇಶ ಇಟಗಿ ಇದ್ದರು.