ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಲಿಂಡರ್‌ಗೆಂದು ಕೊಟ್ಟ ಹಣದಿಂದ ಹೆಂಡ ಕುಡಿದ: ಮದ್ಯವ್ಯಸನಿ ಪತಿಯನ್ನು ಕೊಂದ ಪತ್ನಿ

ಸಿಲಿಂಡರ್‌ ಹಣದಲ್ಲೇ ಕುಡಿದು ಬಂದಿದ್ದ ಉಮೇಶ್
Last Updated 17 ಮೇ 2020, 3:34 IST
ಅಕ್ಷರ ಗಾತ್ರ

ಬೆಂಗಳೂರು: ನಿತ್ಯವೂ ಮದ್ಯ ಕುಡಿದು ಬಂದು ಜಗಳ ತೆಗೆದು ಹಲ್ಲೆ ಮಾಡುತ್ತಿದ್ದ ಪತಿಯನ್ನು ಪತ್ನಿಯೇ ಕೊಲೆ ಮಾಡಿರುವ ಘಟನೆ ಹನುಮಂತನಗರದಲ್ಲಿ ನಡೆದಿದೆ.

ಹನುಮಂತನಗರ ಠಾಣೆ ವ್ಯಾಪ್ತಿಯ ಕತ್ರಿಗುಪ್ಪೆ ಬಳಿ ಉಮೇಶ್ (45) ಎಂಬುವರ ಕೊಲೆ ಆಗಿದ್ದು, ಆ ಸಂಬಂಧ ಪತ್ನಿ ಆಶಾ (36) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

‘ಕಲಬುರ್ಗಿಯ ದಂಪತಿ ಕೆಲಸ ಹುಡುಕಿಕೊಂಡು 12 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಮದ್ಯವ್ಯಸನಿ ಆಗಿದ್ದ ಉಮೇಶ್, ದುಡಿದ ಹಣವನ್ನೆಲ್ಲ ಕುಡಿತಕ್ಕೆ ಖರ್ಚು ಮಾಡುತ್ತಿದ್ದರು. ನಿತ್ಯವೂ ಕುಡಿದು ಬಂದು ಪತ್ನಿಗೆ ಕಿರುಕುಳ ನೀಡುತ್ತಿದ್ದರು. ವಿನಾಕಾರಣ ಹಲ್ಲೆ ಸಹ ಮಾಡುತ್ತಿದ್ದರು.’

’ಮನೆಯಲ್ಲಿದ್ದ ಅಡುಗೆ ಅನಿಲ್ ಸಿಲಿಂಡರ್ ಇತ್ತೀಚೆಗೆ ಖಾಲಿ ಆಗಿತ್ತು. ಹೊಸ ಸಿಲಿಂಡರ್ ತರುವಂತೆ ಹೇಳಿದ್ದ ಪತ್ನಿ, ಉಮೇಶ್‌ ಕೈಗೆ ₹500 ಕೊಟ್ಟಿದ್ದರು. ಆದರೆ, ಅದೇ ಹಣದಲ್ಲಿ ಮದ್ಯ ಖರೀದಿಸಿ ಕುಡಿದು ಮನೆಗೆ ಹೋಗಿದ್ದರು’ ಎಂದು ಪೊಲೀಸರು ತಿಳಿಸಿದರು.

’ಮದ್ಯದ ಅಮಲಿನಲ್ಲೇ ಪುನಃ ಜಗಳ ತೆಗೆದಿದ್ದ ಉಮೇಶ್, ಮರದ ದೊಣ್ಣೆಯಿಂದ ಪತ್ನಿ ಮೇಲೆ ಹಲ್ಲೆ ಮಾಡಿದ್ದರು. ಸಿಟ್ಟಾದ ಪತ್ನಿ, ಅದೇ ದೊಣ್ಣೆ ಕಸಿದುಕೊಂಡು ಪತಿ ತಲೆಗೆ ಹೊಡೆದಿದ್ದರು. ಸ್ಥಳದಲ್ಲೇ ಕುಸಿದು ಬಿದ್ದ ಉಮೇಶ್ ತೀವ್ರ ರಕ್ತಸ್ರಾವದಿಂದ ಅಸುನೀಗಿದ್ದರು’ ಎಂದು ಹೇಳಿದರು.

‘ಪತಿ ಕಿರುಕುಳದಿಂದ ಬೇಸತ್ತಿದ್ದೆ. ಆತ್ಮರಕ್ಷಣೆಗಾಗಿ ಕೊಲೆ ಮಾಡಿರುವುದಾಗಿ ಪತ್ನಿಯೇ ಒಪ್ಪಿಕೊಂಡು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT