ಬೆಂಗಳೂರು: ರಸ್ತೆ ಬದಿ ಚರಂಡಿ ಹಾಗೂ ಮಳೆ ನೀರು ಹರಿಯುವ ಬೃಹತ್ ಕಾಲುವೆಗಳ ತಳಭಾಗದಲ್ಲಿ ಕಾಂಕ್ರೀಟ್ ಹಾಕಬಾರದು ಮತ್ತು ಮಳೆನೀರು ಇಂಗಲು ವ್ಯವಸ್ಥೆ ರೂಪಿಸಬೇಕು ಎಂದು ಬಿಬಿಎಂಪಿ ಹಾಗೂ ಬಿಡಿಎಗೆ ಮತ್ತೊಮ್ಮೆ ತಾಕೀತು ಮಾಡಲಾಗಿದೆ.
ಸುವರ್ಣಮುಖಿ ನದಿ ಜಲಾನಯನ ಪುನಶ್ಚೇತನ ಯೋಜನೆಯ ವ್ಯಾಪ್ತಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಪ್ರದೇಶಗಳಿದ್ದು, ಈ ಇಲಾಖೆಗಳು ತಮ್ಮ ಸುಪರ್ದಿಯಲ್ಲಿರುವ ಪ್ರದೇಶಗಳಲ್ಲಿ ಮಳೆ ನೀರು ಇಂಗುವಂತೆ ಚರಂಡಿಗಳಲ್ಲಿ ವ್ಯವಸ್ಥೆ ಮಾಡಬೇಕು ಎಂದು ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್ ಸೂಚಿಸಿದ್ದಾರೆ.
ನಗರದ ದಕ್ಷಿಣ ತಾಲ್ಲೂಕಿನ ಬಹುತೇಕ ಪ್ರದೇಶದ ಮಳೆ ನೀರು ಸುವರ್ಣಮುಖಿ ನದಿಗೆ ಹರಿಯುತ್ತದೆ. ಬಿಬಿಎಂಪಿ ಹಾಗೂ ಬಿಡಿಎ ಪ್ರದೇಶ ಈ ವ್ಯಾಪ್ತಿಯಲ್ಲಿ ಹೆಚ್ಚಿದ್ದು, ನಗರದಲ್ಲಿ ಬೀಳುವ ಮಳೆ ನೀರನ್ನು ಚರಂಡಿಗಳಲ್ಲಿ ಇಂಗಿಸಲು, ‘ಇಂಗು ಗುಂಡಿಗಳನ್ನು’ ನಿರ್ಮಿಸಬೇಕು. ಇನ್ನು ಮುಂದೆ ಹೊಸದಾಗಿ ಚರಂಡಿಗಳನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ಕೆಳಭಾಗದಲ್ಲಿ ಕಾಂಕ್ರೀಟ್ ಹಾಕಲೇಬಾರದು ಎಂದು ತಾಕೀತು ಮಾಡಲಾಗಿದೆ.
ಚರಂಡಿಗಳು ಹಾಗೂ ಬೃಹತ್ ಕಾಲುವೆಗಳಿಂದ ಮಳೆ ನೀರು ಜಲಮೂಲಗಳಿಗೆ ಹರಿಯುತ್ತದೆ. ಹೀಗಾಗಿ ಪ್ಲಾಸ್ಟಿಕ್, ಒಳಚರಂಡಿ ನೀರು ಹಾಗೂ ಘನತ್ಯಾಜ್ಯ ವಸ್ತುಗಳು ಚರಂಡಿಗಳಿಗೆ ಸೇರದಂತೆ ಖಚಿತಪಡಿಸಿಕೊಳ್ಳಬೇಕು. ಜಲಮೂಲಗಳಿಗೆ ಅಡ್ಡಿ ಉಂಟು ಮಾಡುವ ಎಲ್ಲ ರೀತಿಯ ನಿರ್ಮಾಣಗಳನ್ನೂ ತೆರವುಗೊಳಿಸಿ, ಮಳೆ ನೀರು ಸಂಗ್ರಹದ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಬಿಬಿಎಂಪಿಯ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಅವರು ಜಲಮೂಲಗಳಿಗೆ ಘನತ್ಯಾಜ್ಯ ಬಾರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಎಸ್ಟಿಪಿ ಸ್ಥಾಪನೆ: ಬೆಂಗಳೂರು ಜಲಮಂಡಳಿ ವ್ಯಾಪ್ತಿಯಲ್ಲಿ ಒಳಚರಂಡಿ ನೀರನ್ನು ಪ್ರದೇಶವಾರು ನಿಯಂತ್ರಣ ಮಾಡುವುದು ಅಗತ್ಯವಾಗಿದೆ. ಜನವಸತಿ ಪ್ರದೇಶಗಳಲ್ಲಿ ಎಲ್ಲರೂ ಒಳಚರಂಡಿ ಸಂಪರ್ಕವನ್ನು ಹೊಂದಿರುವ ಬಗ್ಗೆ ಜಲಮಂಡಳಿ ಖಚಿತಪಡಿಸಿಕೊಳ್ಳಬೇಕು. ಒಳಚರಂಡಿ ನೀರನ್ನು ತೆರೆದ ಕಾಲುವೆಗೆ ಹರಿಸುವ ಮುನ್ನ ಅದನ್ನು ಸಂಸ್ಕರಿಸಿಯೇ ಹರಿಸಬೇಕು. ಅದಕ್ಕಾಗಿ ಅಗತ್ಯವಿರುವೆಡೆ ತ್ಯಾಜ್ಯ ನೀರು ಸಂಸ್ಕರಣೆ ಘಟಕಗಳನ್ನು (ಎಸ್ಟಿಪಿ) ನಿರ್ಮಿಸಬೇಕು ಎಂದು ಜಲಮಂಡಳಿಗೆ ಆದೇಶಿಸಲಾಗಿದೆ.
ಬಿಬಿಎಂಪಿ, ಬಿಡಿಎ ಹಾಗೂ ಜಲಮಂಡಳಿ ಯಾವುದೇ ರೀತಿಯ ಹೆಚ್ಚಿನ ಅನುದಾನವನ್ನು ನಿರೀಕ್ಷಿಸದೆ, ಲಭ್ಯವಿರುವ ಅನುದಾನದಲ್ಲೇ ಈ ಎಲ್ಲ ಕಾರ್ಯಗಳನ್ನು ಅನುಷ್ಠಾನಗೊಳಿಸಬೇಕು. ಒಂದು ತಿಂಗಳಲ್ಲಿ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ, ಅನುಷ್ಠಾನ ಕಾರ್ಯ ಆರಂಭಿಸಬೇಕು ಎಂದು ಮೇ 17ರಂದೇ ಆದೇಶಿಸಲಾಗಿದೆ.
13,873 ಕಿ.ಮೀ; ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರಸ್ತೆ 860 ಕಿ.ಮೀ; ಮಳೆನೀರು ಹರಿಯುವ ಬೃಹತ್ ಕಾಲುವೆ 5,500 ಕಿ.ಮೀ; ಬಿಡಿಎ ವ್ಯಾಪ್ತಿಯ ರಸ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.