ಬೆಂಗಳೂರು: ‘ರಾಜ್ಯದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ‘ಅನಿಲ ಭಾಗ್ಯ’ ಯೋಜನೆಯಡಿ 97 ಸಾವಿರ ಫಲಾನುಭವಿಗಳಿಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ’ ಎಂದುಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್), ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಾಗೂ ತೈಲ ಸಂಸ್ಥೆಗಳ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ‘ಸಕ್ಷಮ್–ಸಂರಕ್ಷಣ ಕ್ಷಮತಾ ಮಹೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಾರಿಗೆ ಮತ್ತು ಸರಕು ವಾಹನಗಳಿಂದ ಪರಿಸರಕ್ಕೆ ಹೆಚ್ಚು ಮಾಲಿನ್ಯ ಉಂಟಾಗುತ್ತಿದೆ. ಇದನ್ನು ತಡೆಯಲು ವಾಹನಗಳನ್ನು ಸದಾ ಸುಸ್ಥಿತಿಯಲ್ಲಿಡುವುದು ಹಾಗೂಇಂಧನ ಉಳಿತಾಯ ಮಾಡಲು ‘ಸಕ್ಷಮ್’ ಕಾರ್ಯಕ್ರಮ ಪೂರಕ’ ಎಂದರು.
‘ತೈಲ ಪ್ರಾಕೃತಿಕ ಸಂಪತ್ತು. ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ. ತೈಲ ಉಪಯೋಗಿಸುವುದು ಮತ್ತು ಸಂರಕ್ಷಿಸುವ ಕುರಿತು ಅರಿವು ಮೂಡಿಸುವ ಉದ್ದೇಶದಿಂದಬಿಎಂಟಿಸಿ, ಕೆಎಸ್ಆರ್ಟಿಸಿ ಚಾಲಕರಿಗೆ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ’ ಎಂದರು.
‘ರಾಜ್ಯದ ಒಂಬತ್ತು ಡಿಪೊಗಳು ಇಂಧನ ದಕ್ಷತೆಯಲ್ಲಿ ಅತ್ಯುತ್ತಮ ಸಾಧನೆ ಪ್ರದರ್ಶಿಸಿದ್ದು, ತಲಾ ₹50 ಸಾವಿರ ನಗದು ಬಹುಮಾನ ವಿತರಿಸಲಾಗಿದೆ. ಬಿಎಂಟಿಸಿ ಸಂಸ್ಥೆಯೂ ₹5 ಲಕ್ಷ ಮೊತ್ತದ ಬಹುಮಾನ ತನ್ನದಾಗಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಸಾರಿಗೆ ಸಂಸ್ಥೆಗಳು ಇನ್ನಷ್ಟು ಸಾಧನೆ ಮಾಡಲಿ’ ಎಂದು ಹೇಳಿದರು.
ಐಒಸಿಎಲ್ನ ರಾಜ್ಯ ಮುಖ್ಯಸ್ಥ ಡಿ.ಎಲ್.ಪ್ರಮೋದ್,‘ ಪೆಟ್ರೋಲಿಯಂ ಸೇರಿದಂತೆ ಶೇ 80ರಷ್ಟು ತೈಲವನ್ನು ಬೇರೆಡೆಯಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಈ ತೈಲ ಸಂಪತ್ತನ್ನು ಮಿತವ್ಯಯವಾಗಿ ಬಳಸಿಕೊಂಡು ಸಂರಕ್ಷಿಸುವಂತೆ ಅರಿವು ಮೂಡಿಸಲು ವಿವಿಧ ಇಲಾಖೆಗಳ ಸಹಯೋಗದಲ್ಲಿ ಜ.15ರಿಂದ ಫೆ.15ರವರೆಗೆ ಸಕ್ಷಮ್ ಅಭಿಯಾನ ಹಮ್ಮಿಕೊಂಡಿದ್ದೇವೆ. ಇದರ ಭಾಗವಾಗಿವಿದ್ಯಾರ್ಥಿಗಳಿಗೆ ಪ್ರಬಂಧ, ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನೂ ಏರ್ಪಡಿಸಲಾಗುವುದು’ ಎಂದರು.
ಇಂಧನ ದಕ್ಷತೆ ತೋರಿದ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಸಂಸ್ಥೆಗಳ ವಿವಿಧ ಡಿಪೊಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.