ನೆಲಮಂಗಲ: ರಿಯಲ್ ಎಸ್ಟೇಟ್ ಉದ್ಯಮಿಯೂ ಆಗಿರುವ ಕಾಂಗ್ರೆಸ್ ಮುಖಂಡ ವೆಂಕಟರಾಜು ಅವರ ಅರಿಶಿನಕುಂಟೆ ಮನೆಯ ಮೇಲೆ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿ ಮಾಡಿ ಶೋಧ ನಡೆಸಿದರು.
ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಆರು ಕಾರುಗಳಲ್ಲಿ ಬಂದ 20 ಅಧಿಕಾರಿಗಳು ಹಾಗೂ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ. ಮನೆಯ ನಾಲ್ಕು ಕೊಠಡಿ, ಶೌಚಾಲಯ, ದೇವರ ಮನೆ, ಕಚೇರಿಯಲ್ಲಿ ಶೋಧ ನಡೆಸಿ ವಿವಿಧ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ವೆಂಕಟರಾಜು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದಾರೆ. ಚುನಾವಣೆಯಲ್ಲಿ ಬಳಸಲು ನಗದು ಸಂಗ್ರಹಿಸಿಟ್ಟಿರುವ ಶಂಕೆಯ ಮೇಲೆ ಅವರ ಮನೆ ಮೇಲೆ ಐ.ಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಲ್ಪ ಪ್ರಮಾಣದ ನಗದು ಮತ್ತು ಸುಮಾರು 1 ಕೆ.ಜಿ.ಯಷ್ಟು ಚಿನ್ನಾಭರಣ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.