ರಾಜರಾಜೇಶ್ವರಿ ನಗರ:‘ಶ್ರೀಮಂತಿಕೆ, ಅಧಿಕಾರ ಎಂದಿಗೂ ಶಾಶ್ವತವಲ್ಲ ಹೃದಯವಂತಿಕೆಯ ಹಣತೆ ಪ್ರಜ್ವಲಿಸಬೇಕಾಗಿದೆ ಎಂದು ಕವಿ ಜಯಂತ್ ಕಾಯ್ಕಿಣಿ ಅವರು ಅಭಿಪ್ರಾಯಪಟ್ಟರು.
ಪೂರ್ಣಪ್ರಜ್ಞ ಬಡಾವಣೆಯಲ್ಲಿ ಸಂಧ್ಯಾದೀಪ ಟ್ರಸ್ಟ್(ರಿ) ವಯೋವೃದ್ಧರ ಕ್ಷೇಮಾಕಾಂಕ್ಷಿ ಸಂಸ್ಥೆಯ 28ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ‘ಜಾತಿ, ಮತ, ಭೇದ– ಭಾವವಿಲ್ಲದೆ ವಯೋವೃದ್ಧರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಧ್ಯಾದೀಪ ಟ್ರಸ್ಟ್ನಲ್ಲಿ ಮಾತೃಭಾವನೆ ಕಾಣಬಹುದು’ ಎಂದರು.
‘ನಿರಂತರವಾದ ಶೋಷಣೆಯಿಂದ ಕಲುಷಿತ ವಾತಾವರಣ ನಿರ್ಮಾಣಗೊಂಡು ರಾಜಕಾರಣಿಗಳು, ಸಾದು ಸಂತರು ತಮ್ಮ ಪ್ರವೃತ್ತಿಯನ್ನು ಬದಲಿಸಿಕೊಂಡು ವಿಶಾಲ ಹೃದಯವಂತಿಕೆ ಮೈಗೂಡಿಸಿಕೊಳ್ಳುವ ಮೂಲಕ ಸಾರ್ವಜನಿಕರ ಹೃದಯವನ್ನು ತಮ್ಮ ಹೃದಯದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಆಗ ಮಾತ್ರ ಮಾನವೀಯತೆಯ ಮೌಲ್ಯಗಳು ಉಳಿಯುತ್ತವೆ’ ಎಂದರು.
ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರಕುಮಾರ್, ‘ಹಿರಿಯ ಚೇತನಗಳು ಪ್ರಜೆಗಳ ಯೋಗಕ್ಷೇಮವನ್ನು ಸರ್ಕಾರಗಳು ನೋಡಿಕೊಳ್ಳಬೇಕು. ಅಂತಹ ಕೆಲಸವನ್ನು ಬಿಟ್ಟು ರಾಜಕಾರಣಿಗಳು ಜಾತಿ, ಧರ್ಮದ ಹೆಸರೇಳಿಕೊಂಡು ಅಧಿಕಾರವನ್ನು ಅನುಭವಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಧ್ಯಾದೀಪ ಟ್ರಸ್ಟ್ (ರಿ) ಅಧ್ಯಕ್ಷೆ ರತ್ನಮ್ಮ.ಎಂ.ಶ್ರೀನಿವಾಸ್ ಮಾತನಾಡಿ, ‘ನೊಂದ ಹಿರಿಯ ಜೀವಗಳನ್ನು ಒಂದೆಡೆ ಸೇರಿಸಿ ಅವರನ್ನು ಮಕ್ಕಳಂತೆ ಕಂಡು ಸೇವೆಯನ್ನು ಟ್ರಸ್ಟ್ ನಡೆಸಿಕೊಂಡು ಬರಲಾಗುತ್ತಿದೆ’ಎಂದರು. ಬೇಲಿ ಮಠದ ಪೀಠಾಧ್ಯಕ್ಷ ಶ್ರೀ ಶಿವರುದ್ರಸ್ವಾಮೀಜಿ ಮಾತನಾಡಿದರು.