ಕೆ.ಆರ್.ಪುರ: ಮಹದೇವಪುರ ವಿಧಾನಸಭಾ ಕ್ಷೇತ್ರದ ಪ್ರಮುಖ ರಸ್ತೆಗಳ ಗುಣಮಟ್ಟ ಮತ್ತು ಸ್ಥಿತಿಗತಿ ಪರಿಶೀಲಿಸಲು ಅಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ಶಾಸಕ ಅರವಿಂದ ಲಿಂಬಾವಳಿ ಅವರು ‘ಕ್ಲೀನ್ ಸ್ಟ್ರೀಟ್–75ಕೆ ಚಾಲೆಂಜ್’ ತಪಾಸಣೆ ಅಭಿಯಾನ ಹಮ್ಮಿಕೊಂಡಿದ್ದಾರೆ. ಇದರ ಅಂಗವಾಗಿ ಭಾನುವಾರ ಅವರುಮೋಟರ್ ಬೈಕ್ನಲ್ಲಿ 40 ಕಿ.ಮೀ ಸವಾರಿ ಮಾಡಿದರು.
ಕಾಡುಬೀಸನಹಳ್ಳಿ ಕೆಳಸೇತುವೆಯಿಂದ ಹೊರಟು ವರ್ತೂರು ಪೋಲಿಸ್ ಠಾಣೆ ರಸ್ತೆ, ವರ್ತೂರು ಕೊಡಿ, ಗುಂಜೂರು, ಕಾರ್ಮೆಲರಾಂ ರೈಲ್ವೆ ಸೇತುವೆ, ಸರ್ಜಾಪುರ ರಸ್ತೆ, ಕಸವನ ಹಳ್ಳಿ ರಸ್ತೆ, ಬೆಳ್ಳಂದೂರು ಮುಖ್ಯ ರಸ್ತೆ, ಹರಳೂರು ರಸ್ತೆ, ಇಬ್ಬಲೂರು ಜಂಕ್ಷನ್, ಹೊರವಲಯ ರಸ್ತೆ ಮೂಲಕ ದೇವರಬೀಸನಹಳ್ಳಿ ತಲುಪಿದರು.
‘ರಸ್ತೆಗಳ ಅಭಿವೃದ್ಧಿ ಗುಣಮಟ್ಟ, ಬೀದಿಗಳ ಸ್ವಚ್ಛತೆ ಪರಿಶೀಲಿಸಲು ಬೈಕ್ನಲ್ಲಿ ತಪಾಸಣೆ ಕೈಗೊಂಡಿದ್ದೇನೆ. ಸಮಸ್ಯೆಗಳ ನಿವಾರಣೆಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿರುವ ಅಂಗಡಿ, ಮಳಿಗೆಗಳನ್ನು ತಕ್ಷಣ ತೆರವುಗೊಳಿಸುವಂತೆ ಸೂಚಿಸಿದ್ದೇನೆ’ ಎಂದು ಲಿಂಬಾವಳಿ ತಿಳಿಸಿದರು.
ಮಹದೇವಪುರ ವಲಯದ ಜಂಟಿ ಆಯುಕ್ತ ವೆಂಕಟಾಚಲಪತಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಮನೋಹರ ರೆಡ್ಡಿ, ಕ್ಲೆಮೆಂಟ್ ಜಯಕುಮಾರ್, ಮುಖಂಡರಾದ ರಾಜರೆಡ್ಡಿ, ಜಯಚಂದ್ರ ರೆಡ್ಡಿ, ವೆಂಕಟಸ್ವಾಮಿ ರೆಡ್ಡಿ, ವರ್ತೂರು ಶ್ರೀಧರ್, ಎಲ್.ರಾಜೇಶ್, ನಲ್ಲೂರಹಳ್ಳಿ ಚಂದ್ರಶೇಖರರೆಡ್ಡಿ ಇದ್ದರು.