ಬೆಂಗಳೂರು: ‘ಶಿಕ್ಷಕರು ಪಠ್ಯಕ್ರಮದ ಅನುಸಾರ ಟಿಪ್ಪಣಿಗಳನ್ನು ನೀಡುವುದನ್ನು ಬಿಟ್ಟು,ವಿದ್ಯಾರ್ಥಿಗಳ ಗೊಂದಲ ಮತ್ತು ಸಂದೇಹಗಳನ್ನು ನಿವಾರಿಸಿ, ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು’ ಎಂದುಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎಂ.ಆರ್. ದೊರೆಸ್ವಾಮಿ ತಿಳಿಸಿದರು.
ಪಿಇಎಸ್ ವಿಶ್ವವಿದ್ಯಾಲಯವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನ ಹಾಗೂಬೋಧಕರಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಪಠ್ಯಕ್ರಮದ ಟಿಪ್ಪಣಿಗಳು ಈಗ ಗೂಗಲ್ನಲ್ಲಿಯೇ ದೊರೆಯುತ್ತವೆ. ಹತ್ತಾರು ವರ್ಷಗಳ ಹಿಂದೆ ತಯಾರಿಸಿದ ಟಿಪ್ಪಣಿಗಳನ್ನೇ ಈಗಿನ ವಿದ್ಯಾರ್ಥಿಗಳಿಗೂ ನೀಡಿದಲ್ಲಿ ಶಿಕ್ಷಣ ವ್ಯವಸ್ಥೆಯ ಸುಧಾರಣೆ ಸಾಧ್ಯವಿಲ್ಲ. ಶಿಕ್ಷಕರು ಕಾಲಕಾಲಕ್ಕೆ ಜ್ಞಾನ ವೃದ್ಧಿಸಿಕೊಂಡು, ವಿದ್ಯಾರ್ಥಿಗಳಲ್ಲಿಕೌಶಲ ವೃದ್ಧಿಗೆ ಆದ್ಯತೆ ನೀಡಬೇಕು’ ಎಂದರು.
ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಕೆ.ಜೆ.ರಾವ್ ಮಾತನಾಡಿ, ‘ವಸ್ತುವಿನಲ್ಲಿ ಬೆಳಕಿನ ಚದರುವಿಕೆಯಿಂದ ಬೆಳಕಿನ ಶಕ್ತಿಯಲ್ಲಾಗುವ ಬದಲಾವಣೆಯನ್ನು ಗುರುತಿಸಿದವರಲ್ಲಿ ರಾಮನ್ ಮೊದಲಿಗರು. ಅವರು ರಾಮನ್ ಪರಿಣಾಮ (ರಾಮನ್ ಎಫೆಕ್ಟ್) ಸಿದ್ದಾಂತವನ್ನು ವಿಶ್ವಕ್ಕೆ ಪರಿಚಯಿಸಿದರು. ಈ ಜಗತ್ತಿನ ಪ್ರತಿಯೊಂದರ ಹಿಂದೆಯೂ ವಿಜ್ಞಾನವಿದೆ. ಇಂದು ನಾವು ಆಧುನಿಕ ಸೌಲಭ್ಯಗಳನ್ನು ಹೊಂದಿ ಆರಾಮದ ಜೀವನ ನಡೆಸುತ್ತಿದ್ದೇವೆ ಎಂದಾದರೆ ಅದಕ್ಕೆ ವಿಜ್ಞಾನವೇ ಕಾರಣ’ ಎಂದರು.