ಬೆಂಗಳೂರು: ಹೆಬ್ಬಾಳ ಮತ್ತು ಸರ್ಜಾಪುರ ನಡುವಿನ ಮೆಟ್ರೊ ಮಾರ್ಗಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಬಿಎಂಆರ್ಸಿಎಲ್ ಟೆಂಡರ್ ಆಹ್ವಾನಿಸಿದೆ.
ರಾಜ್ಯ ಸರ್ಕಾರ ಬಜೆಟ್ನಲ್ಲಿ ಘೋಷಣೆ ಮಾಡಿದ ಒಂದು ತಿಂಗಳ ಅವಧಿಯಲ್ಲೇ ಡಿಪಿಆರ್ಗೆ ಟೆಂಡರ್ ಪ್ರಕ್ರಿಯೆಯನ್ನು ಬಿಎಂಆರ್ಸಿಎಲ್ ಆರಂಭಿಸಿದೆ. ಬಿಡ್ಡುದಾರರು ಮೇ 17ರೊಳಗೆ ತಾಂತ್ರಿಕ ಮತ್ತು ಹಣಕಾಸು ಬಿಡ್ ಸಲ್ಲಿಸಬೇಕು. ಡಿಪಿಆರ್ ಸಿದ್ಧಪಡಿಸಲು8 ತಿಂಗಳ ಗಡುವು ನಿಗದಿಪಡಿಸಲು ಬಿಎಂಆರ್ಸಿಎಲ್ ಉದ್ದೇಶಿಸಿದೆ.
₹15 ಸಾವಿರ ಕೋಟಿ ಅಂದಾಜು ವೆಚ್ಚದ 37 ಕಿಲೋ ಮೀಟರ್ ಉದ್ದದ ಈ ಮಾರ್ಗವು ಅಗರ, ಕೋರಮಂಗಲ, ಡೇರಿ ವೃತ್ತದ ಮೂಲಕ ಹಾದುಹೋಗಲಿದೆ.
ಮೆಟ್ರೊ ಜಾಲಕ್ಕೆ ಮಾಸ್ಟರ್ಪ್ಲ್ಯಾನ್ ರೂಪಿಸುವಾಗಲೇ ಈ ಮಾರ್ಗದ ಪ್ರಸ್ತಾವ ಇತ್ತು. ಕಾರಣಾಂತರಗಳಿಂದ ಅದರ ಅನುಷ್ಠಾನ ಸಾಧ್ಯವಾಗಿರಲಿಲ್ಲ. ಈ ಮಾರ್ಗವು ನಗರದ ಕೇಂದ್ರ ವಾಣಿಜ್ಯ ಪ್ರದೇಶಗಳಲ್ಲಿನ ಮೆಟ್ರೊ ಜಾಲವನ್ನು ಮತ್ತಷ್ಟು ಬಲಪಡಿಸಲಿದೆ. ಹೆಬ್ಬಾಳದಿಂದ ಕೋರಮಂಗಲ ತನಕ ಸುರಂಗ ಮಾರ್ಗ ಹಾಗೂ ಅಲ್ಲಿಂದ ಸರ್ಜಾಪುರದವರೆಗೆ ಎತ್ತರಿಸಿದ ಮಾರ್ಗ ನಿರ್ಮಾಣಗೊಳ್ಳಲಿದೆ ಎಂದು ಮೆಟ್ರೊ ಅಧಿಕಾರಿಗಳು ತಿಳಿಸಿದ್ದಾರೆ.