ಬೆಂಗಳೂರು: ಶ್ರೀರಾಂಪುರ ಮೆಟ್ರೊ ನಿಲ್ದಾಣದಲ್ಲಿ ಎಸ್ಕಲೇಟರ್ ಪಕ್ಕದ ಕಿಂಡಿಯಿಂದ ರಸ್ತೆಗೆ ಬಿದ್ದು ಮಗುವೊಂದು ಮೃತಪಟ್ಟ ಬಳಿಕ ಕಿಂಡಿಗೆ ಬಲೆಯನ್ನು ಅಳವಡಿಸಲಾಗಿದೆ. ಆದರೆ, ಎತ್ತರಿಸಿದ ಮಾರ್ಗದ ಬಹುತೇಕ ಮೆಟ್ರೊ ನಿಲ್ದಾಣಗಳಲ್ಲಿ ಎಸ್ಕಲೇಟರ್ಗಳ ಪಕ್ಕದ ಕಿಂಡಿಗಳಿನ್ನೂ ಹಾಗೆಯೇ ಇದ್ದು, ಆತಂಕ ದೂರವಾಗಿಲ್ಲ.
‘ಹೆಚ್ಚಿನ ಕಡೆ ಮೆಟ್ರೊ ನಿಲ್ದಾಣಗಳಲ್ಲಿ ಎಸ್ಕಲೇಟರ್ ಪಕ್ಕದ ಕಿಂಡಿಯನ್ನು ಇನ್ನೂ ಮುಚ್ಚಿಲ್ಲ. ಹೊಸಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ನಾನು ಇವತ್ತು ಬರುವಾಗಲೂ ಕಿಂಡಿ ಹಾಗೆಯೇ ಇತ್ತು’ ಎಂದು ಪ್ರಯಾಣಿಕ ಸಂತೋಷ್ ಅವರು ತಿಳಿಸಿದರು.
‘ಬಸವನಗುಡಿ ನ್ಯಾಷನಲ್ ಕಾಲೇಜು ಮೆಟ್ರೊ ನಿಲ್ದಾಣದಲ್ಲೂ ಕಿಂಡಿ ಹಾಗೆಯೇ ಇದೆ. ಅವಘಡ ಸಂಭವಿಸಿದ ಬಳಿಕವಾದರೂ ಬೆಂಗಳೂರು ಮೆಟ್ರೊ ರೈಲು ನಿಗಮದವರು (ಬಿಎಂಆರ್ಸಿಎಲ್) ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು’ ಎಂದು ಪ್ರಯಾಣಿಕ ಆನಂದ ಅವರು ತಿಳಿಸಿದರು.
‘ಎಸ್ಕಲೇಟರ್ ಪಕ್ಕದ ಕಿಂಡಿ ಮುಚ್ಚಲು ಕ್ರಮ ಕೈಗೊಂಡಿದ್ದೇವೆ. ಹಂತ ಹಂತವಾಗಿ ಎಲ್ಲ ನಿಲ್ದಾಣಗಳಲ್ಲೂ ಕಿಂಡಿಗಳಿಗೂ ತಾತ್ಕಾಲಿಕವಾಗಿ ಬಲೆಗಳನ್ನು ಅಳವಡಿಸುತ್ತೇವೆ. ಈ ಕಿಂಡಿಗಳನ್ನು ಶಾಶ್ವತವಾಗಿ ಮುಚ್ಚುವ ಪ್ರಸ್ತಾವವೂ ಇದೆ’ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್.ಯಶವಂತ ಚೌಹಾಣ್ ‘ಪ್ರಜಾವಾಣಿ’ಗೆ ತಿಳಿಸಿದರು.