ಪೀಣ್ಯ ದಾಸರಹಳ್ಳಿ: ‘ಬಾಂಗ್ಲಾದೇಶದಿಂದ ನುಸುಳಿಕೊಂಡು ಬಂದು ಇಲ್ಲಿ ಅಕ್ರಮವಾಗಿ ನೆಲೆಸಲು ಅವಕಾಶ ನೀಡುವುದಿಲ್ಲ. ಅಂಥವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು’ ಎಂದು ಶಾಸಕ ಎಸ್. ಮುನಿರಾಜು ಎಚ್ಚರಿಸಿದರು.
ಚಿಕ್ಕಬಾಣಾವರ ಕಾವೇರಿ ಬಡಾವಣೆ ಹತ್ತಿರದ ಸುಮಾರು ಮೂರು ಎಕರೆ ತೋಟದ ಜಾಗದಲ್ಲಿ 50ಕ್ಕೂ ಹೆಚ್ಚು ಬಿಡಾರ ಹಾಕಿಕೊಂಡು ಪ್ಲಾಸ್ಟಿಕ್, ಸ್ಕ್ರಾಪ್ ಮುಂತಾದ ವಹಿವಾಟು ನಡೆಸುತ್ತಿರುವವರ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಸಮೇತ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಮಾತನಾಡಿದರು.
‘ನುಸುಳುಕೋರರು ಮೊದಲು ಕೋಲ್ಕತ್ತಕ್ಕೆ ಬರುತ್ತಾರೆ. ಅಲ್ಲಿಂದ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮಾಡಿಸಿಕೊಂಡು ದೇಶದ ಮೂಲೆಮೂಲೆಗೂ ವ್ಯಾಪಿಸುತ್ತಾರೆ. ರಾಜ್ಯದಲ್ಲಿ ಸ್ಥಳೀಯ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಮೂಲಕ ವಿಳಾಸ ಬದಲಿಸಿಕೊಂಡು ವಾಸಿಸುತ್ತಾರೆ’ ಎಂದರು.
‘ಸುತ್ತಮುತ್ತ ಪ್ರದೇಶದಲ್ಲಿ ಸಿಗುವ ವಸ್ತುಗಳು ಪ್ಲಾಸ್ಟಿಕ್, ಸ್ಕ್ರಾಪ್ ಮತ್ತು ರಾತ್ರಿ ವೇಳೆ ಕೋಳಿ, ಮೇಕೆ ಕದಿಯುತ್ತಾರೆ. ಹಾಗೆಯೇ ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿರುವ ಶಂಕೆಯಿದೆ’ ಎಂದು ಹೇಳಿದರು.
‘ಹಿಂದೆ ಮೇದರಹಳ್ಳಿಯಲ್ಲಿ ನೆಲೆಸಿದ್ದರು. ಆಗ ಸೋಲದೇವನಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಮೂಲಕ ತೆರವು ಗೊಳಿಸಲಾಯಿತು. ಅಲ್ಲಿಂದ ಈ ಸ್ಥಳಕ್ಕೆ ಬಂದು ನೆಲೆಸಿದ್ದು ದಿನದಿಂದ ದಿನಕ್ಕೆ ಇವರ ಸಂಖ್ಯೆ ಹೆಚ್ಚುತ್ತಿದೆ’ ಎಂದರು.