ಬೆಂಗಳೂರು: ‘ಹಣ, ಜಾತಿ, ಕುಟುಂಬದ ರಾಜಕೀಯ ಹಿನ್ನೆಲೆಯುಳ್ಳ ಕೆಲವರು ಈ ಹಿಂದೆ ಪ್ರಧಾನಿಯಾಗಿದ್ದಾರೆ. ಆದರೆ, ತಮ್ಮ ಶ್ರಮದಿಂದ ಪ್ರಧಾನಿ ಹುದ್ದೇಗೇರಿದವರು ನರೇಂದ್ರ ಮೋದಿ’ ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ರಾಷ್ಟ್ರಧರ್ಮ ಸಂಘಟನೆ ಆಯೋಜಿಸಿದ್ದ ‘ಮೋದಿ ಮತ್ತೊಮ್ಮೆ’ ಆಡಿಯೊ ಮತ್ತು ವಿಡಿಯೊ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಮೋದಿ ದೇಶದ ಅಭಿವೃದ್ಧಿಯ ಪಾಲುದಾರರು. ಭಾರತವನ್ನು ಜಗತ್ತಿಗೆ ಪರಿಚಯಿಸಿದವರು’ ಎಂದರು.
‘ಅದೃಷ್ಟದ ಮೂಲಕ ಅಧಿಕಾರಕ್ಕೆ ಏರಿದರು ಮನಮೋಹನ್ ಸಿಂಗ್. ಆದರೆ, ಆಡಳಿತ ನಡೆಸಿದ್ದು ಮಾತ್ರ ಸೋನಿಯಾ ಗಾಂಧಿ. ಸಚಿವ ಸಂಪುಟಕ್ಕೆ ಕಿಮ್ಮತ್ತು ನೀಡದಂತಹ ಸ್ಥಿತಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿತ್ತು. ಆದರೆ, ಸಂಪುಟವನ್ನು ಪ್ರಜಾಪ್ರಭುತ್ವದ ದೇಗುಲ ಎಂದು ಕರೆದವರು ಮೋದಿ’ ಎಂದು ಹೇಳಿದರು.
‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ದೇವೇಗೌಡರು ‘ಅವರೊಬ್ಬ ನೀಚ ಮುಖ್ಯಮಂತ್ರಿ’ ಎಂದಿದ್ದರು. ಈಗ ಒಂದೇ ವೇದಿಕೆಯಲ್ಲಿದ್ದಾರೆ’ ಎಂದು ವ್ಯಂಗ್ಯಮಾಡಿದರು.
ನಟ ಪ್ರಕಾಶ್ ಬೆಳವಾಡಿ, ‘ಪ್ರಾಮಾಣಿಕವಾಗಿ ಕೆಲಸ ಮಾಡುವ ವ್ಯಕ್ತಿ ಮೋದಿ. ಅವರ ಘನತೆ ಕಾಪಾಡುವ ಹೊಣೆ ಇಲ್ಲಿನ ಕಾರ್ಯಕರ್ತರ ಮೇಲಿದೆ. ಮೋದಿ ಕುರಿತು ಅಸಭ್ಯವಾಗಿ ಮಾತನಾಡುವವರ ವಿರುದ್ಧ ಯಾರೂ ಮಾತನಾಡಬಾರದು’ ಎಂದು ಸಲಹೆ ನೀಡಿದರು.
ಪ್ರಧಾನಿ ಮೋದಿ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯ ವಿವರಯುಳ್ಳ ‘ಮೋದಿ ಮತ್ತೊಮ್ಮೆ’ ಹಾಡನ್ನು ಚೇತನ್ ಮಂಜುನಾಥ್ ನಿರ್ದೇಶಿಸಿದ್ದಾರೆ. ಚಹಾದೊಂದಿಗೆ ಚರ್ಚೆ ವಾಹನಕ್ಕೆ ಚಾಲನೆ ನೀಡಲಾಯಿತು.