ಉಪಕೇಂದ್ರ ಮುಳುಗಡೆ: ಭಾರಿ ಮಳೆಗೆ ಮೇ 17 ರಂದು ಬೆಂಗಳೂರಿನ ನಾಗವಾರ ಸಮೀಪದ ಗೆದ್ದಲಹಳ್ಳಿ ಯಲ್ಲಿರುವ 66/11 ಕೆವಿ ಉಪಕೇಂದ್ರ ನೀರಿನಲ್ಲಿ ಮುಳುಗಿತ್ತು. ಶಿವಾಜಿನಗರ ಬೆಸ್ಕಾಂ ವಿಭಾಗದ ಸಿಬ್ಬಂದಿ ರಾತ್ರಿ 12 ಗಂಟೆಗೆ ಜೆಸಿಬಿ ಸಹಾಯದಿಂದ ಕೆಪಿಟಿಸಿಎಲ್ ಆವರಣ ಗೋಡೆ ಒಡೆದು ಸುಮಾರು 1 ಕಿ.ಮೀ. ದೂರದವರೆಗೆ ಪಕ್ಕದ ಜಮೀನಿನಲ್ಲಿ ಕಾಲುವೆ ಮಾಡಿ, ನೀರು ಹೊರಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ವಡ್ಡರಪಾಳ್ಳ, ರಾಜಣ್ಣ ಬಡಾವಣೆ, ಗೆದ್ದಲಹಳ್ಳಿ, ಬೈರತಿ ಸುತ್ತಲಿನ ಪ್ರದೇಶದ ಸುಮಾರು 28ಸಾವಿರ ಗ್ರಾಹಕರಿಗೆ ಮಂಗಳವಾರ ರಾತ್ರಿ 3 ಗಂಟೆ ವೇಳೆಗೆ ವಿದ್ಯುತ್ ಪೂರೈಸಲಾಗಿದೆ ಎಂದು ಶಿವಾಜಿ ನಗರ ವಿಭಾಗದ ಬೆಸ್ಕಾಂ ಅಧಿಕಾರಿಗಳು ತಿಳಿಸಿದರು. ಗೆದ್ದಲಹಳ್ಳಿ ಉಪಕೇಂದ್ರವು ಭಾರಿಮಳೆಗೆ 2020ರಲ್ಲೂ ಮುಳುಗಡೆಯಾಗಿತ್ತು. ಆಗ ವಿದ್ಯುತ್ ಸಂಪರ್ಕ ಸರಿಪಡಿಸಲು 15 ಗಂಟೆಗಳು ಹೆಚ್ಚು ಕಾಲ ತಗಲಿತ್ತು ಎಂದು ಬೆಸ್ಕಾಂ ಶಿವಾಜಿನಗರ ವಿಭಾಗದ ಅಧಿಕಾರಿಗಳು ತಿಳಿಸಿದರು.