ಬೆಂಗಳೂರು: ಮನೆಗಳಿಗೆ ನುಗ್ಗಿ ಕಳವು ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವ ಜೊತೆಗೇ, ಎರಡೂವರೆ ವರ್ಷಗಳ ಹಿಂದೆ ನಡೆದ ರೌಡಿಶೀಟರ್ ಒಬ್ಬನ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಆರ್ಎಂಸಿ ಯಾರ್ಡ್ ಪೊಲೀಸರು ಯಶಸ್ವಿಯಾಗಿದ್ದಾರೆ.
ದೊಡ್ಡಬಳ್ಳಾಪುರ ರೈಲ್ವೆ ಸ್ಟೇಷನ್ ಬಳಿಯ ನಿವಾಸಿ ಪ್ರವೀಣ್ (23), ಚನ್ನರಾಯಪಟ್ಟಣದ ನಿವಾಸಿ, ಗೊರಗುಂಟೆಪಾಳ್ಯದಲ್ಲಿ ನೆಲೆಸಿರುವ ಮಧುಕುಮಾರ್ (39), ಟಿ. ದಾಸರಹಳ್ಳಿಯ ಪ್ರವೀಣ್ ಕುಮಾರ್ (42) ಬಂಧಿತರು.
ಬಂಧಿತರಿಂದ ₹ 40 ಸಾವಿರ ನಗದು ಮತ್ತು ₹ 17 ಲಕ್ಷ ಮೌಲ್ಯದ 495 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಆರೋಪಿಗಳ ಪೈಕಿ ಮಧುಕುಮಾರ್, ಪೀಣ್ಯ ಪೊಲೀಸ್ ಠಾಣೆ ರೌಡಿಶೀಟರ್ಬಸವ ಎಂಬಾತನನ್ನು ಕೊಲೆ ಮಾಡಿರುವ ಸಂಗತಿ ಬಯಲಾಗಿದೆ.
ಮಧುಕುಮಾರ್ ಹಳೆ ಆರೋಪಿಯಾಗಿದ್ದು, ತನ್ನ ಸಹಚರ ಪ್ರವೀಣ್ ಜತೆ ಸೇರಿ ಕಳವು ಮಾಡುತ್ತಿದ್ದ. ಕದ್ದ ಚಿನ್ನಾಭರಣಗಳನ್ನು ಚಿನ್ನದ ಅಂಗಡಿ ಹೊಂದಿದ್ದ ಪ್ರವೀಣ್ ಕುಮಾರ್ ಎಂಬಾತನಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.