ಬೆಂಗಳೂರು: ನಾಡಹಬ್ಬ ದಸರಾ ಅಂಗವಾಗಿ ದುಬೈನ ಯುನೈಟೆಡ್ ಅರಬ್ ಎಮಿರೇಟ್ಸ್ನ (ಯುಎಇ) ’ಹೆಮ್ಮೆಯ ಕನ್ನಡಿಗರು ತಂಡ‘ವು ಈ ಬಾರಿಯ 'ದಸರಾ ಕ್ರೀಡೋತ್ಸವ'ವನ್ನು ಕೊರೊನಾ ಕಾರಣದಿಂದ ಆನ್ಲೈನ್ ಮೂಲಕ ಹಮ್ಮಿಕೊಂಡಿತ್ತು.
‘ಹೆಮ್ಮೆಯ ಕನ್ನಡಿಗರು ತಂಡ’ದ ಅಧ್ಯಕ್ಷ ಸುದೀಪ್ ದಾವಣಗೆರೆ, ‘ಈ ಕಾರ್ಯಕ್ರಮವನ್ನು ಕೊರೊನಾ ಸೇನಾನಿಗಳಿಗೆ ಅರ್ಪಿಸಲಾಯಿತು. ಅಂತರರಾಷ್ಟ್ರೀಯ ಕ್ರೀಡಾತಾರೆ ಮಾಲತಿ ಕೃಷ್ಣಮೂರ್ತಿ ಹೊಳ್ಳ, ವಾಲಿಬಾಲ್ ಪಟು ಇಮ್ತಿಯಾಜ್ ಅಹಮದ್ ಹಾಗೂ ಈಜುಗಾರ ಶ್ರೀಹರಿ ನಟರಾಜ್ ಅತಿಥಿಯಾಗಿ ಭಾಗವಹಿಸಿದ್ದರು’ ಎಂದು ವಿವರಿಸಿದರು.
‘ಸಮಾರೋಪದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಭಾಷಣ ಸ್ಪರ್ಧೆಯ ವಿಜೇತರಿಗೆ ಪದಕ ಮತ್ತು ಪ್ರಶಸ್ತಿ ವಿತರಿಸಲಾಯಿತು. ಕನ್ನಡ ನಾಡು-ನುಡಿ ಕುರಿತು ಕವಿಗೋಷ್ಠಿ, ರಂಗೋಲಿ ಸ್ಪರ್ಧೆ, ರಸಪ್ರಶ್ನೆ, ಅಂತ್ಯಾಕ್ಷರಿ ಸ್ಫರ್ಧೆಗಳನ್ನು ಆಯೋಜಿಸಿದ್ದೆವು’ ಎಂದರು.