ಪೀಣ್ಯ ದಾಸರಹಳ್ಳಿ: ಹೆಗ್ಗನಹಳ್ಳಿ ಭಾಗದಲ್ಲಿ ದಾಸರಹಳ್ಳಿ ಸಾಮೂಹಿಕ ಗಣೇಶೋತ್ಸವ ಸಮಿತಿಯಿಂದ ನಡೆದ ಗಣೇಶೋತ್ಸವದಲ್ಲಿ 18 ಅಡಿ ಎತ್ತರದ ಗಣೇಶನಿಗೆ ಪ್ರಸಾದವಾಗಿ ಮಾಡಲಾಗಿದ್ದ 15 ಕೆ.ಜಿ. ಲಡ್ಡುವನ್ನು ಬಿಜೆಪಿಯ ದಾಸರಹಳ್ಳಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಪ್ರಕಾಶ್ ಅವರು ಹರಾಜಿನಲ್ಲಿ ₹5.25 ಲಕ್ಷಕ್ಕೆ ಖರೀದಿಸಿದರು.
ಪ್ರಸಾದದ ಲಡ್ಡು ಕಳೆದ ವರ್ಷ ₹ 4.25 ಲಕ್ಷಕ್ಕೆ ಹರಾಜು ಆಗಿತ್ತು. ಈ ಹಣವನ್ನು ಮುಂದಿನ ವರ್ಷದ ಸಾಮೂಹಿಕ ಗಣೇಶೋತ್ಸವಕ್ಕೆ ವಿನಿಯೋಗಿಸಲಾಗುವುದು ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.
ನೆಲಗದರನಹಳ್ಳಿ ನಿಸರ್ಗ ಶಾಲೆಯಿಂದ ಪೀಣ್ಯ 2ನೇ ಹಂತ, ಹೆಗ್ಗನಹಳ್ಳಿ ಕ್ರಾಸ್, ಸುಂಕದಕಟ್ಟೆವರೆಗೆ ಗಣೇಶನ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ 25ಕ್ಕೂ ಅಧಿಕ ಗಣೇಶ ಮೂರ್ತಿಗಳು ಇದ್ದವು. ವೀರಗಾಸೆ, ಡೊಳ್ಳು ಕುಣಿತ, ಚಂಡೆ, ಗೊರವರ ಕುಣಿತ, ತಮಟೆ ವಾದ್ಯ, ಗೊಂಬೆ ಕುಣಿತ ಮುಂತಾದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಡಿಜೆ ಸದ್ದಿಗೆ ಯುವಕರು, ಮಹಿಳೆಯರು ಹೆಜ್ಜೆ ಹಾಕಿದರು.
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಮರಿಸ್ವಾಮಿ, ದಾಸರಹಳ್ಳಿ ಮಂಡಲ ಅಧ್ಯಕ್ಷ ಸೋಮಶೇಖರ್, ಬಿಜೆಪಿ ಮುಖಂಡರಾದ ಎಚ್.ಎನ್. ಗಂಗಾಧರ್, ಸಪ್ತಗಿರಿ ಆನಂದ್, ವಿನೋದ್ ಗೌಡ, ಭರತ್ ಸೌಂದರ್ಯ, ನಿಸರ್ಗ ಕೆಂಪರಾಜು ಇದ್ದರು.