ಬೆಂಗಳೂರು:ಶುದ್ಧ ಇಂಧನದ ಬಗ್ಗೆ ಜಾಗೃತಿ ಮೂಡಿಸಲು ನಗರದ ಕ್ರಾನಿಕ್ ಫೌಂಡೇಷನ್ ಇದೇ ಭಾನುವಾರ ‘ಪ್ರೈಡ್ ರನ್’ಹಮ್ಮಿಕೊಂಡಿದೆ. ನೋಂದಣಿಗೆ ಇಂದೇ (ಸೆ.5) ಕೊನೆಯ ದಿನ.https://priderun.in/ ಅಥವಾ ಬುಕ್ಮೈ ಶೋ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
ರಾಜ್ಯ ಸೌರಶಕ್ತಿ ಉತ್ಪಾದಕರ ಸಂಘಟನೆ ಅಧ್ಯಕ್ಷ ರಮೇಶ್ ಶಿವಣ್ಣ ಅವರ ನೇತೃತ್ವದಲ್ಲಿ ‘ಇಂಗಾಲ ಕೈಬಿಡಿ, ಶುದ್ಧ ಇಂಧನ ಆರಿಸಿಕೊಳ್ಳಿ’ ಎಂಬ ಘೋಷವಾಕ್ಯದಡಿ ಕಾರ್ಯಕ್ರಮ ರೂಪುಗೊಂಡಿದೆ.ಬೆಳಿಗ್ಗೆ 5.30ಕ್ಕೆ ಆರಂಭವಾಗುವ ಓಟದಲ್ಲಿ 10, 5 ಹಾಗೂ 2 ಕಿಲೋಮೀಟರ್ನ ವಿವಿಧ ಘಟ್ಟಗಳಲ್ಲಿ ಪಾಲ್ಗೊಳ್ಳಲು ಆಸಕ್ತರಿಗೆ ಅವಕಾಶವಿದೆ.
ಕಾರ್ಪೊರೇಟ್ ವಲಯ, ವ್ಯಾಪಾರಿ ಸಮುದಾಯ, ವಿವಿಧ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ನಾಗರಿಕರು ಓಟದಲ್ಲಿ ಭಾಗಿಯಾಗಲಿದ್ದಾರೆ.
ಅಭಿಯಾನ ಏಕೆ?:
ನಮ್ಮ ಆರೋಗ್ಯ ಹಾಗೂ ವಾತಾವರಣದ ಮೇಲೆ ಜಾಗತಿಕ ತಾಪಮಾನ ಏರಿಕೆ ಗಂಭೀರಪರಿಣಾಮ ಬೀರುತ್ತಿದೆ.ಹಸಿರುಮನೆ ಅನಿಲಗಳ ಬಿಡುಗಡೆಯಿಂದ ಭೂಮಿ ಬಿಸಿಯಾಗುತ್ತಿದೆ. ಇಂಧನ ಉತ್ಪಾದನೆಗೆ ಸೌರಶಕ್ತಿ, ಗಾಳಿಶಕ್ತಿ ಹಾಗೂ ಇತರೆ ನವೀಕರಿಸಬಹುದಾದ ಮೂಲಗಳನ್ನು ಆಯ್ದುಕೊಳ್ಳುವುದರಿಂದ ವಾತಾವರಣದಲ್ಲಿ ಇಂಗಾಲದ ಪ್ರಮಾಣ ಕಡಿಮೆಯಾಗುತ್ತದೆ.
ಇಂಗಾಲ ರಹಿತ ಕಾರಿಡಾರ್ ನಿರ್ಮಿಸುವುದು ಕ್ರಾನಿಕ್ ಫೌಂಡೇಷನ್ನ ಉದ್ದೇಶ. ವಿದ್ಯುತ್ ಬಳಕೆದಾರರು ನವೀಕರಿಸುಬಹುದಾದ ಇಂಧನಗಳಿಗೆ ಬದಲಾಗುವಂತೆ ಜಾಗೃತಿ ಮೂಡಿಸುವುದು ಅಭಿಯಾನದ ಉದ್ದೇಶ.