ಬೆಂಗಳೂರು: ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಒಟ್ಟು 161 ಕೈದಿಗಳನ್ನು ಸನ್ನಡತೆಯ ಆಧಾರದಲ್ಲಿ ಅವಧಿ ಪೂರ್ವ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದ್ದು, ಕಾರಾಗೃಹ ಇಲಾಖೆ ಈ ಸಂಬಂಧ ಆದೇಶ ಹೊರಡಿಸಿದೆ.
ಸದರಿ ವಿಚಾರದ ಕುರಿತು ಕೈಗೊಂಡ ಕ್ರಮದ ಬಗ್ಗೆ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಅಥವಾ ವರದಿ ಸಲ್ಲಿಸುವಂತೆಯೂ ಕಾರಾಗೃಹಗಳ ಉಪ ಮಹಾನಿರೀಕ್ಷಕರಿಗೆ ಸೂಚಿಸಲಾಗಿದೆ.
ರಾಜ್ಯಪಾಲರು ಮರು ಪರಿಶೀಲಿಸಲು ನಿರ್ದೇಶನ ನೀಡಿದ್ದ ಪ್ರಕರಣಗಳ ಪೈಕಿ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ 25, ಮೈಸೂರು ಕಾರಾಗೃಹದ 21, ಬೆಳಗಾವಿ ಕಾರಾಗೃಹದ 10, ಕಲಬುರಗಿ ಕಾರಾಗೃಹದ 5, ವಿಜಯಪುರ ಕಾರಾಗೃಹದ 12, ಬಳ್ಳಾರಿ ಕಾರಾಗೃಹದ 5, ಧಾರವಾಡ ಕಾರಾಗೃಹದ 7 ಮಂದಿ ಬಿಡುಗಡೆಯಾಗಲಿದ್ದಾರೆ.
ಹಾಗೆಯೇ, ಕಾನೂನು ಇಲಾಖೆಯ ಅಭಿಪ್ರಾಯ ಕೋರಿದ್ದ ಹಾಗೂ ಎಲ್.ಸಿ.ಆರ್.ಸಮಿತಿ ಸಭೆಯಲ್ಲಿ ಶಿಫಾರಸುಗೊಂಡಿದ್ದವರ ಪೈಕಿಬೆಂಗಳೂರು ಕಾರಾಗೃಹದ 25, ಮೈಸೂರಿನ 9, ಕಲಬುರಗಿಯ 13, ಬಳ್ಳಾರಿಯ 8, ಧಾರವಾಡದ 6, ಶಿವಮೊಗ್ಗದ 1, ಬೆಳಗಾವಿಯ 4 ಹಾಗೂ ವಿಜಯಪುರ ಕಾರಾಗೃಹದಲ್ಲಿರುವ 10 ಮಂದಿ ಬಿಡುಗಡೆಯಾಗಲಿದ್ದಾರೆ.